ಹೊಸಪೇಟೆ (ವಿಜಯನಗರ): ವೈಕುಂಠ ಏಕಾದಶಿ ಅಂಗವಾಗಿ ನಗರದ ದೇವಸ್ಥಾನಗಳಲ್ಲಿ ಸೋಮವಾರ ಭಕ್ತರ ದಂಡು ಕಂಡು ಬಂತು.
ಬೆಳಿಗ್ಗೆ ಹೊತ್ತು ಹರಿಯುವ ಮುನ್ನವೇ ದೇಗುಲಗಳೆದುರು ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಹೊತ್ತೇರುತ್ತಿದ್ದಂತೆ ಭಕ್ತರ ಸಂಖ್ಯೆ ಏರುತ್ತಲೇ ಇತ್ತು. ಅದರಲ್ಲೂ ಅಮರಾವತಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ದಿನವಿಡೀ ಜನಜಾತ್ರೆ ಇತ್ತು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದರು.
ಬೆಳಿಗ್ಗೆ 4ಗಂಟೆಗೆ ಲಕ್ಷ್ಮಿ ವೆಂಕಟೇಶ್ವರ ದೇವರಿಗೆ ಅಭಿಷೇಕ ಮಾಡಿ, ಹೂಗಳಿಂದ ಅಲಂಕಾರಗೊಳಿಸಿ ಪೂಜೆ ನೆರವೇರಿಸಲಾಯಿತು. ಅನಂತರ ಉತ್ಸವಮೂರ್ತಿಗಳಿಗೂ ಪೂಜೆ ಸಲ್ಲಿಸಲಾಯಿತು. ವೈಕುಂಠ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು.
ಭಕ್ತರು ತಡಹೊತ್ತು ಸಾಲಿನಲ್ಲಿ ನಿಂತು ದೇವರು, ವೈಕುಂಠ ದರ್ಶನ ವ್ಯವಸ್ಥೆ ಮಾಡಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಗರದ ವೇಣುಗೋಪಾಲ ದೇವಸ್ಥಾನ, ವಡಕರಾಯ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಿಗೂ ಭೇಟಿ ಕೊಟ್ಟು ದೇವರ ದರ್ಶನ ಪಡೆದರು.