ಆನೇಕಲ್: ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಪ್ಪನದೊಡ್ಡಿಯ ಬಳಿಯ ಕಲ್ಲುಗಣಿಯ ನೀರಿನಲ್ಲಿ ಸೋಮವಾರ ಈಜಲು ಹೋಗಿದ್ದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸಾಯಿರಾಮ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ, ಕೇರಳ ಮೂಲದ ಯದುಪ್ರಸಾದ್ (21) ಮೃತ ಯುವಕ.
ನಾಲ್ವರು ಸ್ನೇಹಿತರೊಂದಿಗೆ ಸೋಮವಾರ ಮಧ್ಯಾಹ್ನ ಯದುಪ್ರಸಾದ್ ಮಾದಪ್ಪನದೊಡ್ಡಿಯ ಬಳಿ ಕಲ್ಲುಗಣಿಯ ನೀರಿನಲ್ಲಿ ಈಜಲು ಹೋಗಿದ್ದ. ಯದುಪ್ರಸಾದ್ಗೆ ಈಜು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ. ಆತನ ಸ್ನೇಹಿತರು ಈಜಿ ದಡ ಸೇರಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಶವವನ್ನು ಹೊರತೆಗೆದಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.