ಕನಸವಾಡಿ (ದೊಡ್ಡಬಳ್ಳಾಪುರ): ಕನಸವಾಡಿಯ ಶನಿ ದೇವಾಲಯಕ್ಕೆ ಶನಿವಾರ ಹೂವಿನ ಹಾರದಲ್ಲಿ ಮಾಂಸದ ತುಂಡು ಪೋಣಿಸಿಕೊಂಡು ತಂದಿದ್ದ ಇಬ್ಬರನ್ನು ದೇವಾಲಯದ ಸಿಬ್ಬಂದಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಕಂಬಲಹಳ್ಳಿ ರಾಜು ಹಾಗೂ ವೈಟ್ಫಿಲ್ಡ್ ಮೂಲದ ಆಟೋಚಾಲಕ ಸೋಮಶೇಖರ್ ಬಂಧಿತರು. ಈ ಇಬ್ಬರೇ ತಿಂಗಳ ಹಿಂದೆ ದೇವಾಲಯಕ್ಕೆ ಮಾಂಸದ ತುಂಡುಗಳ ಹಾರವನ್ನು ನೀಡಿ ಹೋಗಿದ್ದರು.
ಮಧ್ಯಾಹ್ನದ ಸಮಯವಾಗಿದ್ದರಿಂದ ದೇವಾಲಯದ ಸಿಬ್ಬಂದಿ ಹೂವಿನ ಹಾರದ ಪ್ಲಾಸ್ಟಿಕ್ ಕವರ್ ಬಾಗಿಲಿನಲ್ಲೇ ಪಡೆದು ಸಂಜೆಯ ಅಲಂಕಾರಕ್ಕೆ ಬಳಸಲಾಗುವುದು ಎಂದು ಹೇಳಿ ಕಳುಹಿಸಿದ್ದರು. ಸಂಜೆ ಕವರ್ ತೆಗೆದಾಗ ಹಾರದಲ್ಲಿ ಮಾಂಸದ ತುಂಡು ಕಂಡು ಬಂದಿದ್ದವು.
ಆರೋಪಿಗಳು ದೇವಾಲಯಕ್ಕೆ ಬಂದು ಹೋಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ದೇವಾಲಯದ ಸಿಬ್ಬಂದಿ ಆರೋಪಿಗಳಿಗಾಗಿ ಕಾಯುತ್ತಿದ್ದರು. ದೊಡ್ಡಬೆಳವಂಗಲ ಪೊಲೀಸರೂ ಹುಡುಕಾಟ ನಡೆಸಿದ್ದರು. ಆದರೆ, ಆರೋಪಿಗಳು ಪತ್ತೆಯಾಗಿರಲಿಲ್ಲ. ಇದೇ ಆರೋಪಿಗಳು ಶನಿವಾರ ದೇವಾಲಯಕ್ಕೆ ಹಾರ ಕೊಡಲು ಬಂದಾಗ ದೇವಾಲಯದ ಸಿಬ್ಬಂದಿ ಅವರನ್ನು ಗುರುತಿಸಿ, ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಧಾರ್ಮಿಕ ಸ್ಥಳ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.