ದೊಡ್ಡಬಳ್ಳಾಪುರ: ಬಿಜೆಪಿ ವತಿಯಿಂದ ಜುಲೈ 28ರಂದು ಇಲ್ಲಿ ನಡೆಸಲು ಉದ್ದೇಶಿಸಿರುವ ಜನೋತ್ಸವ ಸಮಾವೇಶಕ್ಕೆ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಜೆಸಿಬಿ ಯಂತ್ರದ ಮೂಲಕ ಹಳ್ಳ ತೆಗೆಯಲಾಗುತ್ತಿದೆ.
ಇದಕ್ಕೆ ರಕ್ಷಣಾ ವೇದಿಕೆಯ ಕನ್ನಡಿಗರ ಬಣದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಕ್ಷದ ಕಾರ್ಯಕ್ರಮಕ್ಕಾಗಿ ಕ್ರೀಡಾಂಗಣವನ್ನು ವಿರೂಪಗೊಳಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಇದೇ ಸರ್ಕಾರ ಕ್ರೀಡಾಂಗಣಗಳ ವಿರೂಪ ಮಾಡುವ ಕೆಲಸ ಮಾಡುತ್ತಿದೆ. ಜೆಸಿಬಿ ಮೂಲಕ ಕ್ರೀಡಾಂಗಣದ ಅಂಗಳವನ್ನು ಆಗೆದು ಕ್ರೀಡೆಗಳನ್ನು ಆಡದಂತೆ ಮಾಡಲಾಗುತ್ತಿದೆ. ಹಲವು ಹೋರಾಟಗಳನ್ನು ನಡೆಸುವ ಮೂಲಕ 10 ವರ್ಷಗಳ ಹಿಂದೆ ದುಃಸ್ಥಿತಿಯಲ್ಲಿದ್ದ ಭಗತ್ಸಿಂಗ್ ಕ್ರೀಡಾಂಗಣವನ್ನು ಉತ್ತಮ ಸ್ಥಿತಿಗೆ ತರಲಾಗಿತ್ತು.
ನಿತ್ಯ ನೂರಾರು ಕ್ರೀಡಾಪಟುಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭವಿಷ್ಯದ ಕ್ರೀಡಾಪಟುಗಳ ತಯಾರಿಗೆ ಕಾರಣವಾಗಿರುವ ಕ್ರೀಡಾಂಗಣವನ್ನು ವಿರೂಪ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.
ಹೆಲಿಪ್ಯಾಡ್ ಇಲ್ಲ: ಜನೋತ್ಸವ ಸಮಾವೇಶಕ್ಕೆ ಹೆಲಿಕಾಪ್ಟರ್ ಮೂಲಕ ಯಾರು ಸಹ ಬರುವುದಿಲ್ಲ. ಹೀಗಾಗಿ ಎಲ್ಲೂ ಹೊಸದಾಗಿ ಹೆಲಿಪ್ಯಾಡ್ ನಿರ್ಮಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.