ದೇವನಹಳ್ಳಿ: ರಾಜ್ಯದ ಜನತೆಗೆ ಮಾತು ಕೊಟ್ಟಂತೆ ಐದು ಗ್ರಾರಂಟಿ ಈಡೇರಿಸಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ರೂಪಿಸಿದೆ. ಅದರ ಫಲವಾಗಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ವಾಣಿಜ್ಯ ತೆರಿಗೆ ಕಚೇರಿ ಆವರಣದಲ್ಲಿ ಭೌತಿಕ ಪರೀಕ್ಷಾ ಅಂಗಳದ ಸಂಗ್ರಹ ಕೊಠಡಿ ಸೇರಿದಂತೆ ಇತರ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಸುಗಮ ಸಂಚಾರಕ್ಕಾಗಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ರಸ್ತೆಗಳ ಅಭಿವೃದ್ಧಿಯಿಂದಾಗಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ, ಸ್ಥಳೀಯವಾಗಿ ಆರ್ಥಿಕ ಮಟ್ಟ ಸುಧಾರಣೆಯಾಗಲಿದೆ ಎಂದು ತಿಳಿಸಿದರು.
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಸರ್ಕಾರದಿಂದ ಯಾವುದೇ ರೀತಿಯಲ್ಲಿಯೂ ಅನುದಾನ ಕೊರತೆಯಾಗದಂತೆ ಸಹಕಾರ ನೀಡಲಾಗುವುದು. ವಿಳಂಬ ಮಾಡದೇ ಶೀಘ್ರವಾಗಿ ಅಭಿವೃದ್ಧಿ ಕಾರ್ಯ ಸಾಗಬೇಕು ಎಂದು ಎಚ್ಚರಿಸಿದರು.
ಕೆಪಿಸಿಸಿ ಸದಸ್ಯ ವಿ.ಶಾಂತಕುಮಾರ್ ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ ರವೀಂದ್ರ ಸಿಂಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಚೌಡಪ್ಪನಹಳ್ಳಿ ಲೋಕೇಶ್, ಬೈರೇಗೌಡ, ಮುರಳಿ, ಬೂದಿಗೆರೆ ಲಕ್ಷ್ಮಣ್ ಗೌಡ, ಲಕ್ಷ್ಮಣ್ ಮೂರ್ತಿ, ಮಂಜುನಾಥ್, ರಾಜಶೇಖರ್, ಶಂಕರಪ್ಪ, ಗಂಗಾಧರ್, ದೇವನಹಳ್ಳಿ ಜಗನ್ನಾಥ್ ಇದ್ದರು.
ಆರು ಪಥದ ರಸ್ತೆಗೆ ಒತ್ತಾಯ
ದೇವನಹಳ್ಳಿಯಲ್ಲಿ ಹಾದು ಹೋಗಿರುವ ನಾಲ್ಕು ಪಥದ ಬೆಂಗಳೂರು -ಬಳ್ಳಾರಿ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಪಟ್ಟಣದ ಮುಖಂಡರು ಸಚಿವರಲ್ಲಿ ಮನವಿ ಮಾಡಿದರು. ದಿನೇ ದಿನೇ ವಾಹನ ಸಂಚಾರವೂ ಹೆಚ್ಚಾಗುತ್ತಿದ್ದು ಭವಿಷ್ಯದ ದೃಷ್ಟಿಯಿಂದ ರಸ್ತೆ ವಿಸ್ತರಣೆಗೆ ಒತ್ತಾಯಿಸಿದರು.