ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಇಸ್ತೂರು ಗ್ರಾಮದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ವಸತಿ ಶಿಕ್ಷಣ ಸಂಸ್ಥೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ.
2020ರ ಲಾಕ್ಡೌನ್ ಸಂದರ್ಭದಲ್ಲೂ ಸಹ ಇಸ್ತೂರಿನಲ್ಲೇ ಕೋವಿಡ್ ಸೆಂಟರ್ ತೆರೆಯಲಾಗಿತ್ತು. ಇಲ್ಲಿಗೆ ದಾಖಲಾಗಿದ್ದ ಸಾಕಷ್ಟು ಜನ ಕೊರೊನಾ ಸೋಂಕಿತರು ಗುಣಮುಖರಾಗಿ ಹೊರ ಬಂದಿದ್ದರು.
ಕೋವಿಡ್ ಸೆಂಟರ್ಗೆ ಅಗತ್ಯ ಇರುವ ಮೂಲಭೂತ ಸೌಲಭ್ಯಗಳ ಕುರಿತಂತೆ ಸೋಮವಾರ ಪರಿಶೀಲನೆ ನಡೆಸಿದ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾಹಿತಿ ನೀಡಿದರು.
‘ಕೊರೊನಾ ಸೋಂಕಿತರ ಸಂಖ್ಯೆ ತಾಲ್ಲೂಕಿನಲ್ಲಿ ಪ್ರತಿ ದಿನವು ಹೆಚ್ಚಾಗುತ್ತಲೇ ಇವೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಮತ್ತೆ ಕೋವಿಡ್ ಕೇಂದ್ರಗಳನ್ನು ತೆರೆದು ಅಗತ್ಯ ಚಿಕಿತ್ಸೆ ನೀಡಬೇಕಿದೆ. ಹೀಗಾಗಿ ಆರೋಗ್ಯ, ಪೊಲೀಸ್ ಹಾಗೂ ಸ್ಥಳೀಯ ಪಂಚಾಯಿತಿ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಚಿಕಿತ್ಸಾ ಕೇಂದ್ರಕ್ಕೆ ದಾಖಲಾದವರಿಗೆ ಮುಖ್ಯವಾಗಿ ನೀರಿನ ಸೌಲಭ್ಯ,ಪ್ರತ್ಯೇಕ ಶೌಚಾಲಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರತಿ ದಿನವು ವೈದ್ಯರ ತಂಡ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೋವಿಡ್ ಕೇರ್ ಸೆಂಟರ್ ಸಮೀಪ ಯಾವುದೇ ಅಹಿತಕರ ಘಟನಗಳು ನಡೆಯದಂತೆ ಪೊಲೀಸರು ಸಹ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಿದ್ದಾರೆ’ ಎಂದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ ಮಾಹಿತಿ ನೀಡಿ, ‘ಇಸ್ತೂರು ಕೋವಿಡ್ ಸೆಂಟರ್ನಲ್ಲಿ 40, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 44, ದೇವನಹಳ್ಳಿಯ ಆಕಾಶ್ ಹಾಗೂ ನೆಲಮಂಗಲ ಸಮೀಪದಸಿದ್ಧಾರ್ಥ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆಗೆ ಎಲ್ಲಾಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಕೋವಿಡ್ ಕುರಿತಂತೆ ಯಾವುದೆ ರೀತಿಯ ಗಾಳಿ ಸುದ್ದಿಗಳಿಗೆ ಕಿವಿಗೊಡದೆ ಕೊರೊನಾ ಸೋಕಿನಿಂದ ಪರಾಗಲು ಮಾಸ್ಕ್ ಧರಸುವುದು, ಕೈ ತೊರೆಯುವುದು, ಅಂತರ ಕಾಪಾಡಿಕೊಳ್ಳುವುದು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲರು ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು’ ಎಂದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ನವೀನ್ಕುಮಾರ್, ಅಂಬೇಡ್ಕರ್ ವಸತಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ನಟರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.