ಹೊಸಕೋಟೆ: ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ, ನಾರಾಯಣಸ್ವಾಮಿ ಸೇರಿದಂತೆ ಹಲವರು ನನ್ನಿಂದ ಹಣ ಪಡೆದಿದ್ದಾರೆ ಹೊಸಕೋಟೆ ವಿಧಾನಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಆರೋಪಿಸಿದರು.
ತಾಲ್ಲೂಕಿನ ವಿವಿಧೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಣ ಪಡೆದವರ ಪೈಕಿ ಕೃಷ್ಣಬೈರೇಗೌಡ ಒಬ್ಬರೇ ಲೋಕಸಭಾ ಚುನಾವಣೆಗೆ ತೆಗೆದುಕೊಂಡ ಹಣ ವಾಪಸ್ ನೀಡಿದ್ದಾರೆ. ಉಳಿದ ಯಾರೂ ಇಂದಿಗೂ ಹಣ ವಾಪಸ್ ನೀಡಿಲ್ಲ. ಅವರೆಲ್ಲರೂ ನನ್ನ ಋಣದಲ್ಲಿ ಇದ್ದಾರೆ’ ಎಂದರು.
‘ನಾನು ಕಾಂಗ್ರೆಸ್ ಬಿಡಲು ಸಿದ್ದರಾಮಯ್ಯನವರೇ ಕಾರಣ. ನಾನು ಮಂಜುನಾಥ ಸ್ವಾಮಿಯ ಭಕ್ತನಾಗಿದ್ದು ಸುಳ್ಳು ಹೇಳುವುದಿಲ್ಲ. ನನ್ನ ಬಳಿ ಇರುವ ₹1,200 ಕೋಟಿಗೂ ಅಧಿಕ ಹಣ, ಆಸ್ತಿಯನ್ನು ನ್ಯಾಯವಾಗಿ ಸಂಪಾದಿಸಿದ್ದೇನೆ. ಅದಕ್ಕೆ ಕಾಲಕಾಲಕ್ಕೆ ಸರಿಯಾಗಿ ತೆರಿಗೆ ಪಾವತಿಸುತ್ತೇನೆ. ನಾನು ರಾಜಕೀಯಕ್ಕೆ ಹಣ ಮಾಡಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇನೆ’ ಎಂದರು.
‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಮಾತನಾಡಿ ಶಾಸಕರ ಸಮಸ್ಯೆ ಪರಿಹರಿಸಿ ಎಂದು ಹಿಂದೆ ನಾನು ಸಿದ್ದರಾಮಯ್ಯ ಅವರ ಬಳಿ ಕೇಳಿದ್ದೆ. ನನ್ನ ಮತ್ತು ನನ್ನ ಮಗನ ಕ್ಷೇತ್ರದ ಕೆಲಸವೇ ಮಾಡಿಕೊಡುತ್ತಿಲ್ಲ ಎಂದು ಸಿದ್ದರಾಮಯ್ಯನವರು ಅಸಹಾಯಕತೆ ವ್ಯಕ್ತಪಡಿಸಿದ್ದರು. ಮೈತ್ರಿ ಮುರಿದುಕೊಂಡು ವಿಪಕ್ಷದಲ್ಲಿ ಕೂರೋಣವೆಂದು ಸಲಹೆ ಕೊಟ್ಟದ್ದೆ. ಆಗ ಅವರು ಹೈಕಮಾಂಡ್ ಕಡೆ ಬೆರಳು ತೋರಿದರು. ಕಾಂಗ್ರೆಸ್ನಲ್ಲಿ ಹೈಕಮಾಂಡ್ ಸತ್ತು ಹೋಗಿದೆ. ಅದು ಲೋಕಮಾಂಡ್ ಆಗಿದೆ’ ಎಂದು ದೂರಿದರು.
‘ನೆಹರೂ ಮಾಡದಿರುವ ಕೆಲಸವನ್ನು ಮೋದಿ ಮಾಡಿದ್ದಾರೆ. ಮೋದಿ ಇರುವವರೆಗೆ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿಲ್ಲ’ ಎಂದರು.