ದೇವನಹಳ್ಳಿ/ವಿಜಯಪುರ: ‘ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿದೆ. ರಾಜ್ಯದ ಜನರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಅಣಿಯಾಗಿ ನಿಂತಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ರಕ್ಷಣೆಗೆ ಪಣ ತೊಟ್ಟಿದ್ದೇವೆ’ ಎಂದು ಜಿಲ್ಲಾ ಕಾಂಗ್ರೆಸ್ ಯುವ ಘಟಕದಅಧ್ಯಕ್ಷ ಕೆ.ಆರ್.ನಾಗೇಶ್ ಹೇಳಿದರು.
ತಾಲ್ಲೂಕಿನ ಕುಂದಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದಿಂದ ಒಂದು ಸಾವಿರ ಮಾಸ್ಕ್ ಹಾಗೂ ಅಗತ್ಯ ಔಷಧಗಳನ್ನು ವೈದ್ಯರಿಗೆ ಹಸ್ತಾಂತರಿಸಿ ಮಾತನಾಡಿದರು.
ಕೋವಿಡ್ ಸೋಂಕು ಗಂಭೀರ ಸ್ವರೂಪ ಪಡೆದುಕೊಂಡಿರುವ ಕಾರಣದಿಂದ ಅಷ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದೆ ಬರುತ್ತಿಲ್ಲ. ಮುಂದೆ ನಿಂತು ಜನರ ಕಷ್ಟಗಳನ್ನು ಆಲಿಸಬೇಕಾಗಿದ್ದ ಸರ್ಕಾರ, ನಿಷ್ಕ್ರೀಯವಾಗಿದೆ ಎಂದರು.
ಕೊರೊನಾ 2ನೇ ಅಲೆಯಿಂದ ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು, ಶ್ರಮಿಕರಿಗೆ ಸರ್ಕಾರ ₹10 ಸಾವಿರ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕ್ಷೇತ್ರದಲ್ಲಿ ಜನರಿಗೆ ಅಗತ್ಯವಾಗಿರುವ ರಕ್ಷಣಾ ಸಾಮಗ್ರಿಗಳ ಜತೆಗೆ ಉಚಿತ ಆಂಬುಲೆನ್ಸ್ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದರು.
ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತ್ ಕುಮಾರ್ ಇದ್ದರು.