ಆನೇಕಲ್:ತಮಿಳುನಾಡಿನ ಹೊಸೂರಿನ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಎಂಟು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಗಾಯಗೊಂಡವರನ್ನು ಹೊಸೂರಿನ ರಾಮನಗರದ ನಿವಾಸಿಗಳಾದ ಭೀಮ್ಸಿಂಗ್, ಅರವಿಂದ್, ರೂಬಿ, ಚಂದ್ರಾದೇವಿ, ಹೃತಿಕ್, ಸಬೀರ್ ಮತ್ತು ಸಾಧಿಕ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉತ್ತರ ಪ್ರದೇಶ ಮೂಲದ ಈ ಕುಟುಂಬ ಪಾನಿಪುರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿತ್ತು. ಹೊಸೂರಿನ ರಾಮನಗರದಲ್ಲಿ ವಾಸವಾಗಿದ್ದ ಅವರು ಬೆಳಿಗ್ಗೆ ಅಡುಗೆ ಮಾಡಲು ಗ್ಯಾಸ್ ಸ್ಟೌ ಹೊತ್ತಿಸಿದಾಗ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದವರು ಗಾಯಗೊಂಡಿದ್ದಾರೆ.
ಸಿಲಿಂಡರ್ ಸ್ಫೋಟಕ್ಕೆ ಮನೆಯಲ್ಲಿದ್ದ ವಸ್ತುಗಳು ಚಿಲ್ಲಾಪಿಲ್ಲಿಯಾಗಿದ್ದು ಮನೆಯ ಚಾವಣಿ ಕಿತ್ತು ಹೋಗಿದೆ. ಮನೆಯಲ್ಲಿನ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಹೊಸೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.