ಹೊಸಕೋಟೆ: ಉತ್ತರ ಪ್ರದೇಶದ ಹಾಥರಸ್ ನಲ್ಲಿ ಯುವತಿ ನಡೆದ ಅತ್ಯಾಚಾರ ಹಾಗೂ ಅಲ್ಲಿನ ಪೊಲೀಸ್ ವೈಫಲ್ಯವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಕಾರ್ಯಕರ್ತರು ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನಾ ಸಂಚಾಲಕ ವಾಗಟ ರವಿಕುಮಾರ್ ಉತ್ತರ ಪ್ರದೇಶದಲ್ಲಿ ವಾಲ್ಮೀಕಿ ಸಮುದಾಯದ ಯುವತಿ ತನ್ನ ತಾಯಿಯ ಜೊತೆಗೂಡಿ ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಠಾಕೂರ್ ಸಮುದಾಯದವವರು ಆಕೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿ ದೇಹವನ್ನು ವಿಕಾರಗೊಳಿಸಿ ಪೈಶಾಚಿಕ ಕೃತ್ಯ ಎಸಗಿ ಕೊಲೆ ಮಾಡಿದ್ದಾರೆ ಎಂದರು.
ಈ ಸಂಬಂದ ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳು ಆಕೆಗೆ ನ್ಯಾಯ ಒದಗಿಸದೆ ಅಪರಾಧಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಮಹಿಳೆಯ ಶವವನ್ನೂ ಸಹಾ ಪೋಷಕರಿಗೆ ನೀಡದೆ ಪೊಲೀಸರ ಸಮ್ಮುಖದಲ್ಲಿ ಸುಟ್ಟುಹಾಕಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತಿದ್ದಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೇಟಿ ಬಚಾಮೋ ಬೇಟಿ ಪಡಾವೋ ಎಂದು ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರೆ ಅದೇ ಪಕ್ಷದ ಸರ್ಕಾರದ ಮುಖ್ಯ ಮಂತ್ರಿಯವರು ದಲಿತ ಮಹಿಳೆಯ ವಿಷಯದಲ್ಲಿ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದರು.
ಆಂದ್ರ ಪ್ರದೇಶದ ಪ್ರಿಯಾಂಕ ರೆಡ್ಡಿಯನ್ನು ಅತ್ಯಾಚಾರ ಮಾಡಿದಾಗ ಅಲ್ಲಿನ ಪೊಲೀಸರು ಅತ್ಯಚಾರ ಎಸಗಿದವರಿಗೆ ಗುಂಡಿಕ್ಕಿ ಕೊಂದ ರೀತಿಯಲ್ಲಿಯೇ ಇವರಿಗೂ ಶಿಕ್ಷೆಯಾಗಬೇಕು ಎಂದರು.
ತಾಲ್ಲೂಕು ಪ್ರಧಾನ ಸಂಚಾಲಕ ಮುತ್ಸಂದ್ರ ಶಂಕರ್ ಮಾತನಾಡಿ, ‘ಉತ್ತರ ಪ್ರದೇಶ ಸರ್ಕಾರ ಆರೋಪಿಗಳಿಗೆ ಶಿಕ್ಷೆ ವಿಧಿಸಲು ವಿಫಲವಾಗಿದ್ದು ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ಮುಖಂಡರಾದ ಸುಬ್ಬರಾಜು, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿಸನಹಳ್ಳಿ ಮೂರ್ತಿ, ಮಹಿಳಾ ಅಧ್ಯಕ್ಷೆ ಮಂಜುಳಾ ಇದ್ದರು.