ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಬ್ಯಾಂಕಾಂಕ್ನಿಂದ ಪ್ರಯಾಣಿಕರೊಬ್ಬರು ಬ್ಯಾಗ್ನಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ ಕಾಂಗರೂ ಮರಿ ಸೇರಿದಂತೆ 234 ಕಾಡು ಪ್ರಾಣಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸೋಮವಾರ ತಡರಾತ್ರಿ ಥಾಯ್ ಏರ್ ವೇಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನ ಬ್ಯಾಗ್ ಪರೀಕ್ಷಿಸಿದಾಗ ನಾನಾ ಬಗೆಯ ಹೆಬ್ಬಾವು, ಊರಸವಳ್ಳಿ, ಆಮೆಗಳು ಸೇರಿದಂತೆ ವಿವಿಧ ಜಾತಿಯ ಕಾಡು ಪ್ರಾಣಿಗಳು ಇದ್ದವು. ಎಲ್ಲ ಪ್ರಾಣಿಗಳನ್ನೂ ರಕ್ಷಣೆ ಮಾಡಲಾಗಿದೆ.
ವಿಮಾನ ನಿಲ್ದಾಣದ ಗ್ರೀನ್ ಲೈನ್ ದಾಟಿ ಅದಾಗಲೇ ನಿರ್ಗಮನ ದ್ವಾರ ಬಳಿ ಬಂದಿದ್ದ ಪ್ರಯಾಣಿಕನ ಚಲನವಲನಗಳ ಬಗ್ಗೆ ಶಂಕಿತಗೊಂಡ ಕಸ್ಟಮ್ಸ್ ಅಧಿಕಾರಿಗಳು ಎರಡು ಟ್ರಾಲಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಅನೇಕ ಪ್ಲಾಸ್ಟಿಕ್ ಡಬ್ಬಿ ಮತ್ತು ಚೀಲಗಳಲ್ಲಿ ಪ್ರಾಣಿಗಳನ್ನು ತಂದಿದ್ದ. ಕೆಲವು ಪ್ರಾಣಿಗಳು ಅಳಿವಿನಂಚಿಗೆ ಸೇರಿವೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಕಸ್ಟಮ್ಸ್ ಹಾಗೂ ವನ್ಯಜೀವಿಗಳ ಕಳ್ಳಸಾಗಣೆ ತಡೆ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ.