ವಿಜಯಪುರ(ದೇವನಹಳ್ಳಿ): ಪಟ್ಟಣದ ಸಂತೆ ಮೈದಾನದಲ್ಲಿರುವ ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಮಂಗಳವಾರ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ್ ಬಾಬು ಅಧ್ಯಕ್ಷತೆಯಲ್ಲಿ 112ನೇ ಮಾಸದ ಕನ್ನಡ ದೀಪ ಕಾರ್ಯಕ್ರಮ ನಡೆಯಿತು.
ಪೌರಾಣಿಕ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿರುವ ಕಲಾವಿದರು, ರಂಗಗೀತೆ ಹಾಡುವ ಮೂಲಕ ಕಾರ್ಯಕ್ರಮದಲ್ಲಿ ಕಲಾ ಪ್ರದರ್ಶನ ನೀಡಿದರು.
ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ್ ಬಾಬು ಮಾತನಾಡಿ, ರಂಗಕಲೆ ಹಿರಿಯರಿಗೆ ಸೀಮಿತವಾಗಿ ಅಂತ್ಯವಾಗಬಾರದು. ಅದು ಇಂದಿನ ಪೀಳಿಗೆಗೂ ಗೊತ್ತಾಗಬೇಕು. ಕಲಾವಿದರು ಮನೆಗಳಲ್ಲಿರುವ ಮಕ್ಕಳಿಗೆ ಇದರ ಪರಿಚಯ ಮಾಡಿ ಕಲಾವಿದರನ್ನಾಗಿ ಮಾಡಿದರೆ ಭವಿಷ್ಯದಲ್ಲಿ ರಂಗಕಲೆ ಮತ್ತಷ್ಟು ಶಕ್ತಿ ಪಡೆದುಕೊಳ್ಳುತ್ತದೆ ಎಂದರು.
ಕಲಾವಿದ ಚಂದ್ರಶೇಖರ ಹಡಪದ್ ಮಾತನಾಡಿ, ಸರ್ಕಾರ ಪ್ರತಿಯೊಂದು ಶಾಲೆಯಲ್ಲಿ ರಂಗಕಲಾ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಮಕ್ಕಳಿಂದಲೇ ರಂಗಕಲೆ ಪರಿಚಯ ಮಾಡಿಸುವ ಕಾರ್ಯ ಮಾಡಬೇಕು ಎಂದರು.
ಕನ್ನಡ ಕಲಾವಿದರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಹಳ್ಳಿ, ಹಳ್ಳಿಯಲ್ಲೂ ಕಲಾವಿದರಿದ್ದಾರೆ. ಅವರೆಲ್ಲರನ್ನೂ ಗುರ್ತಿಸುವ ಕೆಲಸವಾಗಬೇಕು ಎಂದರು.
ಸಂಗೀತ ನಿರ್ದೇಶಕ ಎಂ.ವೆಂಕಟರಮಣನಾಯ್ಡು, ಮಹಾತ್ಮಾಂಜನೇಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಜೆ.ಆರ್.ಮುನಿವೀರಣ್ಣ, ಸುಬ್ರಮಣಿ, ಅಶ್ವಥಗೌಡ, ಗೋವಿಂದರಾಜು, ಕೆ.ಎಚ್.ಚಂದ್ರಶೇಖರ್, ರಮೇಶ್, ಮುನಿನಾರಾಯಣಪ್ಪ, ವೆಂಕಟೇಶ್, ಮುನಿರಾಜು ಇದ್ದರು.