ದೊಡ್ಡಬಳ್ಳಾಪುರ: ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದ ಸಮೀಪ ನಡೆದಿದೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಬುಧವಾರ ಅರಣ್ಯ ಇಲಾಖೆ ಗಾರ್ಡ್ ಒಬ್ಬರಿಗೆ ಕಂಡು ಬಂದಿದೆ.
ಸುಮಾರು 15 ದಿನಗಳ ಹಿಂದೆ ಈ ಪ್ರಕರಣ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅರೆ ಬೆಂದಿರುವ ಮಹಿಳೆಯ ಮೃತದೇಹ ಗುರುತು ದೊರೆಯದಷ್ಟು ಕೊಳೆತು ಹೋಗಿದೆ. ದೊಡ್ಡಬಳ್ಳಾಪುರದಿಂದ ಜಕ್ಕಲಮೊಡಗು ಜಲಾಶಯಕ್ಕೆ ಸಾಗುವ ರಸ್ತೆಯಲ್ಲಿನ ನಾರಸಿಂಹನಹಳ್ಳಿ ಸಮೀಪದ ಪೊದೆಯಲ್ಲಿ ದೇಹ ಕಂಡುಬಂದಿದೆ.
ಅರಣ್ಯ ಇಲಾಖೆ ಗಾರ್ಡ್ ಮಾಹಿತಿ ಮೇರೆಗೆ ಡಿವೈಎಸ್ಪಿ ರವಿ, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷ ಸ್ಥಳ ಪರಿಶೀಲನೆ ನಡೆಸಿದರು.
ಮೃತರ ಗುರುತು, ದಾಖಲೆ, ಮಾಹಿತಿ ಯಾವುದು ಲಭ್ಯವಾಗದೇ ಇರುವುದರಿಂದ ಪ್ರಕರಣವನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.