ದೊಡ್ಡಬಳ್ಳಾಪುರ: ಉತ್ತಮ ಸಂವಹನ ಕೌಶಲ ಉದ್ಯೋಗ ಸ್ನೇಹಿ ಭವಿಷ್ಯಕ್ಕೆ ಪೂರಕ. ವಿದ್ಯಾರ್ಥಿಗಳು ಭಾಷಾ ಜ್ಞಾನದ ಜೊತೆಗೆ ಅಭಿವ್ಯಕ್ತಿ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.
ನಗರದ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಉದ್ಯೋಗ ಕೋಶ ಹಾಗೂ ಸಾಂಸ್ಥಿಕ ಗುಣಮಟ್ಟ ಭರವಸೆ ಕೋಶ-ಐಕ್ಯೂಎಸಿ ಸಹಯೋಗದಲ್ಲಿ ಶನಿವಾರದಿಂದ ಪ್ರಾರಂಭವಾದ 10 ದಿನಗಳ ಸಂವಹನ ಹಾಗೂ ಭಾಷಾ ಕೌಶಲ ಅಭಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದ್ದು, ಇಂಗ್ಲಿಷ್ ಸೇರಿದಂತೆ ಪ್ರಮುಖ ಭಾಷೆಗಳ ಮಾತುಗಾರಿಕೆ ಕಲೆ ಹಾಗೂ ಮಾಹಿತಿ ವಿನಿಮಯ ತಂತ್ರಜ್ಞಾನದ ಬಗ್ಗೆ ಅಗತ್ಯ ಮಾರ್ಗದರ್ಶನ ಪಡೆಯಬಹುದಾಗಿದೆ. ಪಿಯುಸಿ ಉತ್ತೀರ್ಣರಾದ ಬಳಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನಂತಹ ನಗರಗಳನ್ನು ಅವಲಂಬಿಸದೆ ಸ್ಥಳೀಯವಾಗಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಕೆ.ಆರ್.ರವಿಕಿರಣ್, ಉದ್ಯೋಗ ತರಬೇತುದಾರ ಬಾಬುಸಾಬಿ,ಉಪಪ್ರಾಂಶುಪಾಲ ದಕ್ಷಿಣಾಮೂರ್ತಿ, ವಿಭಾಗಗಳ ಮುಖ್ಯಸ್ಥರಾದ ಪಿ.ಚೈತ್ರ,ಡಾ.ಚಿಕ್ಕಣ್ಣ, ಸಿ.ಪಿ.ಪ್ರಕಾಶ್, ಸಹಾಯಕ ಪ್ರಾಧ್ಯಾಪಕಿ ನಂದನ ಇದ್ದರು.