ದೇವನಹಳ್ಳಿ: ದೇಶದ ಅಭಿವೃದ್ಧಿಯಲ್ಲಿ ಯುವ ಸಮುದಾಯದ ಪಾತ್ರ ಮಹತ್ವದಾಗಿದ್ದು ಡ್ರಗ್ಸ್ ಸೇವನೆಯಂತಹ ಚಟಕ್ಕೆ ಬಿದ್ದರೆ ಮನುಕುಲದ ನಾಶಕ್ಕೆ ನಾಂದಿಯಾಗಲಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ಬಿಜೆಪಿ ಸೇವಾ ಸಪ್ತಾಹ ಅಂಗವಾಗಿ ಬಿಜೆಪಿ ಯುವ ಮೊರ್ಚಾ ವತಿಯಿಂದ ನಡೆದ ಮಾದಕ ವಸ್ತುಗಳ ಸೇವನೆ ಕುರಿತು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಒಂದು ಸಣ್ಣ ಸುಳಿವಿನಿಂದ ಪತ್ತೆಯಾದ ಡ್ರಗ್ಸ್ ದಂಧೆಯ ಜಾಲ ಇಡಿ ದೇಶದಲ್ಲಿ ವ್ಯಾಪಿಸಿರುವುದು ಬೆಚ್ಚಿ ಬೀಳಿಸುವ ಗಂಭೀರ ವಿಷಯ. ಈ ಜಾಲದಿಂದ ನಮ್ಮ ಅಕ್ಕ ಪಕ್ಕದವರನ್ನೆ ನಂಬದಂತಹ ಸ್ಥಿತಿಗೆ ತಲುಪಿದ್ದೇವೆ. ಇಡಿ ಸಮಾಜವನ್ನು ಸಾಮಾಜಿಕ, ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುವ ಈ ಮಾರಕ ಜಾಲವನ್ನು ಭೇದಿಸಲು ಸಾರ್ವಜನಿಕರು ಸಹಕರಿಸಬೇಕು’ ಎಂದು ಹೇಳಿದರು.
‘ಯುವ ಸಮುದಾಯ ದೇಶದ ಮಾನವ ಸಂಪನ್ಮೂಲ, ಯುವ ಪೀಳಿಗೆ ಕೆಟ್ಟ ಚಟಕ್ಕೆ ಬಲಿಯಾದರೆ ಕುಟುಂಬ ಮತ್ತು ದೇಶಕ್ಕೆ ನಷ್ಟ. ಇದನ್ನರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಪಣ ತೊಟ್ಟಿದ್ದಾರೆ’ ಎಂದು ಹೇಳಿದರು.
‘ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಗಾಂಜಾ ಗಿಡ ಬೆಳೆಸುವುದು ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ಕಾದಿದೆ. ಇತ್ತೀಚೆಗೆ ನೂರಾರು ಕೆ.ಜಿ.ಗಾಂಜಾ ಮತ್ತು ಗಾಂಜಾ ಬೆಳೆಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡ ಜಿ.ಚಂದ್ರಣ್ಣ ಮಾತನಾಡಿ, ‘ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವುದು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆಯಲ್ಲ. ಮಾದಕ ವಸ್ತುಗಳ ಸೇವನೆ ಪಾತಕ ಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ. ಅತಿಯಾದ ಚಟದಿಂದ ಅಕಾಲಿಕ ಮರಣ ಸಂಭವಿಸಲಿದೆ. ಪೊಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು .
ಬಿಜೆಪಿ ತಾಲ್ಲೂಕು ಯುವ ಮೊರ್ಚಾ ಅಧ್ಯಕ್ಷ ಮೋಹನ್ ಮಾತನಾಡಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ನೀಲೇರಿ ಮಂಜುನಾಥ್, ಜಿಲ್ಲಾ ಮಾಧ್ಯಮ ಪ್ರಮುಖ್ ಎಸ್.ರಮೇಶ್ ಕುಮಾರ್, ಮಹಿಳಾ ಮೊರ್ಚಾ ತಾಲ್ಲೂಕು ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷೆ ಪುನೀತಾ, ಎಸ್ಸಿ ಮೊರ್ಚಾ ಕಾರ್ಯದರ್ಶಿ ಆರ್.ಚಂದ್ರಸಾಗರ್, ಭೂ ನ್ಯಾಯ ಮಂಡಳಿ ಅಧ್ಯಕ್ಷ ಮುನಿಕೃಷ್ಣ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.