ದೇವನಹಳ್ಳಿ: ಜೀವನವಿಡೀ ಸರ್ಕಾರಿ ಸೇವೆಗಾಗಿಯೇ ಕರ್ತವ್ಯ ನಿರ್ವಹಿಸುವ ನೌಕರರಿಗೆ ಅವರ ನಿವೃತ್ತಿ ನಂತರ ಬದುಕಲು ಆರ್ಥಿಕ ಬಲದ ಅಗತ್ಯವಿದೆ. ಇದಕ್ಕಾಗಿ ಎನ್ಪಿಎಸ್ ರದ್ದುಪಡಿಸಿ ಒಪಿಎಸ್ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಸರ್ಕಾರಿ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೂ ನೂರಾರು ಸರ್ಕಾರಿ ನೌಕರರು ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎನ್ಪಿಎಸ್ ಸಹವಾಸ, ಕುಟುಂಬದವರು ಉಪವಾಸ; ಬೇಕೇ ಬೇಕು ಒಪಿಎಸ್ ಬೇಕು ಎಂದು ಘೋಷಣೆ ಕೂಗಿದರು.
ಈಗಾಗಲೇ, ಎನ್ಪಿಎಸ್ ಯೋಜನೆಯನ್ನು ರಾಜಸ್ಥಾನ, ಛತ್ತೀಸ್ಗಡ, ಜಾರ್ಖಂಡ್ ಹಾಗೂ ಪಂಜಾಬ್ ರಾಜ್ಯಗಳಲ್ಲಿ ರದ್ದುಪಡಿಸಲಾಗಿದೆ. ರಾಜ್ಯ ಸರ್ಕಾರವೂ ಸರ್ಕಾರಿ ನೌಕರರ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಒಪಿಎಸ್ ಯೋಜನೆ ಜಾರಿಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಪಿಎಸ್ ಜಾರಿಯಿಂದ ನೌಕರರು ಹಾಗೂ ಅವರ ಅವಲಂಬಿತರ ಜೀವನಕ್ಕೆ ಅನುಕೂಲವಾಗುತ್ತದೆ. ಸರ್ಕಾರ ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಶಿರಸ್ತೇದಾರ್ ಭರತ್, ಉಪ ತಹಶೀಲ್ದಾರ್ ಚೈತ್ರಾ, ಪಿಡಿಒ ಸಂಘದ ಅಧ್ಯಕ್ಷ ಬಿರೇಶ್, ಕಾರ್ಯದರ್ಶಿ ಪದ್ಮಮ್ಮ, ಶಿಕ್ಷಕ ಸಂಘದ ಆದರ್ಶ್, ಕಂದಾಯ ನೌಕರರ ಸಂಘ, ಪೌರ ಕಾರ್ಮಿಕರ ಸಂಘ, ಬೆಸ್ಕಾಂ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.