ವಿಜಯಪುರ: ಕೃಷಿ ನಂಬಿ ಬದುಕು ನಡೆಸುತ್ತಿರುವ ಬಡ ಹಾಗೂ ಮಧ್ಯಮ ಕೃಷಿಕರ ಅನುಕೂಲಕ್ಕಾಗಿ ಸರ್ಕಾರ ಆರಂಭಿಸಿರುವ ಗಂಗಾ ಕಲ್ಯಾಣ ಯೋಜನೆ ಹಳ್ಳ ಹಿಡಿದಿದೆ. ನೀರು ಹರಿಯುವುದಕ್ಕಿಂತ ಸವಲತ್ತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಫಲಾನುಭವಿಗಳ ಬೆವರು ಹರಿದಿರುವುದೇಹೆಚ್ಚು.
ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ; ಎನ್ನುವಂತೆ ಯೋಜನೆಗೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದ್ದರೂ ಅಧಿಕಾರಿಗಳು ಫಲಾನುಭವಿಗಳಿಗೆ ಸಕಾಲದಲ್ಲಿ ಕೊಳವೆಬಾವಿ ಕೊರೆಸಿ ಕೊಡಲು ಮುಂದಾಗುತ್ತಿಲ್ಲ. ಅರ್ಜಿ ಸಲ್ಲಿಸಿದವರು ನಿತ್ಯ ಕಚೇರಿಗಳಿಗೆ ಅಲೆದು ಚಪ್ಪಲಿ ಹರಿದಿದೆಯೇ ಹೊರತು ಹನಿ ನೀರು ಹರಿದಿಲ್ಲ.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳ ಆಯ್ಕೆ ಗುರಿ ನಿಗದಿಪಡಿಸಲಾಗಿದೆಯಾದರೂ ಕೊಳವೆಬಾವಿ ಕೊರೆಯಲು ಇದುವರೆಗೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ.
ಸರ್ಕಾರದ ಆದೇಶವನ್ನೇ ಬಂಡವಾಳವಾಗಿಸಿಕೊಂಡು ರೈತರಿಂದ ಅನಧಿಕೃತವಾಗಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಭಾಗದಲ್ಲಿ 1400 ಅಡಿಗಳಿಗೂ ಹೆಚ್ಚು ಕೊರೆಯಬೇಕು ಎಂದು ಮುಖಂಡ ಅಶ್ವಥನಾರಾಯಣಸ್ವಾಮಿ ಹೇಳುತ್ತಾರೆ.
ಯೋಜನೆ ಅನುಷ್ಠಾನದಲ್ಲಿ ಅನೇಕ ಕಡೆ ಅಕ್ರಮ ವ್ಯವಹಾರದ ಆರೋಪವೂ ಕೇಳಿ ಬಂದಿದೆ. ನಿಯಮಗಳ ನೆಪದಲ್ಲಿ ಗುತ್ತಿಗೆದಾರರು ಪಂಪು ಮೋಟಾರು ಅಳವಡಿಕೆಗೆ ಅನವಶ್ಯ ವಿಳಂಬ ಮಾಡುವುದು ಸಾಮಾನ್ಯವಾಗಿದೆ. ಬಹಳಷ್ಟು ಮಂದಿ ರೈತರ ಜಮೀನುಗಳಲ್ಲಿ ಕೊರೆದಿರುವ ಬಾವಿಗಳಿಗೆ ಇದುವರೆಗೂ ಪಂಪು ಮೋಟಾರು ಅಳವಡಿಸಿಲ್ಲ. ಕೆಲ ರೈತರು ಸಾಲ ಮಾಡಿಕೊಂಡು ಮೋಟಾರು ಅಳವಡಿಸಿಕೊಂಡಿದ್ದಾರೆ. ವಿದ್ಯುತ್ ಸಂಪರ್ಕ, ಮೋಟಾರ್ ಅಳವಡಿಕೆ, ಪೂರೈಕೆ ಮಟ್ಟದಿಂದಲೂ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಇದೆ.
ರೈತರ ಕೊಳವೆ ಬಾವಿ ಕನಸಿಗೆ ಅಧಿಕಾರಿಗಳ ನಿರ್ಲಕ್ಷ್ಯ, ಟೆಂಡರ್ ವಿಳಂಬ, ಗುತ್ತಿಗೆದಾರರ ಅವ್ಯವಹಾರದಿಂದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ.