1 ರಿಂದ 5ನೇ ತರಗತಿಯವರೆಗಿನ 80 ಜನ ವಿದ್ಯಾರ್ಥಿಗಳು ಇರುವ ಅನುದಾನಿತ ಸೇಂಟ್ ಮೀರ ಶಾಲೆ ರೊಜೀಪುರದಲ್ಲಿನ ಜಗಜ್ಯೋತಿ ಬಸವೇಶ್ವರ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಬಿಎಸ್ಎ ಪ್ರೌಢ ಶಾಲಾ ಕಟ್ಟಡದಲ್ಲಿಯೇ ಸುಮಾರು 15 ವರ್ಷಗಳಿಂದಲು ನಡೆಯುತ್ತಿದೆ. ಆದರೆ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್.ದಯಾನಂದ ಹಾಗೂ ಇತರೆ ನಿರ್ದೇಶಕರು, ಅಧ್ಯಕ್ಷ ಮುನಿರಾಜು ಅವರ ನಡುವಿನ ಜಗಳದಿಂದಾಗಿ ಗುರುವಾರ ಪ್ರಾಥಮಿಕ ಶಾಲಾ ಮಕ್ಕಳು ಬೀದಿಯಲ್ಲಿ ಕುಳಿತು ಪಾಠ ಕೇಳುವಂತಾಗಿತ್ತು. ಇದಕ್ಕೆ ಪೋಷಕರು ಆಡಳಿತ ಮಂಡಳಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.