ಆನೇಕಲ್:‘ಕೊರೊನಾ ಮಹಾಮಾರಿ ಸಂಬಂಧಿಸಿ ಸರ್ಕಾರ ಮತ್ತು ತಜ್ಞರು ಸೂಚಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ನಟಿ ರಾಗಿಣಿ ದ್ವಿವೇದಿ ತಿಳಿಸಿದರು.
ಅವರು ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಆಹಾರದ ಕಿಟ್ ವಿತರಣೆ ಮತ್ತು ಕೊರೊನಾ ತಡೆಯಲು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಷ್ಟದ ಸಮಯದಲ್ಲಿ ಅವರೊಂದಿಗೆ ಭಾಗಿಯಾಗುವುದು ನಮ್ಮ ಪದ್ಧತಿ. ಹಾಗಾಗಿ ಆರ್ಡಿ ಫೆಲ್ವೇರ್ ಸಂಸ್ಥೆಯ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಕೊರೊನಾ ಸಂಕಟದ ಸಮಯದಲ್ಲೂ ಆಹಾರ ವಿತರಣೆ, ಕಿಟ್ಗಳ ವಿತರಣೆ ಮಾಡಲಾಗಿದೆ. ಯಾರಾದರೂ ಸಮಸ್ಯೆಯಲ್ಲಿದ್ದರೆ ಸಂಸ್ಥೆಯನ್ನು ಸಂಪರ್ಕಿಸಿದರೆ ಸಾಧ್ಯವಾದ ನೆರವು ನೀಡಲು ಬದ್ಧವಾಗಿದ್ದೇವೆ’ ಎಂದರು.
‘ಜನರು ಅಂತರವನ್ನು ಕಾಪಾಡಿಕೊಳ್ಳಬೇಕು. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ರೋಗ ನಿರೋಧಕ ಶಕ್ತಿಯನ್ನು ಪಡೆಯಲು ಪೌಷ್ಟಿಕ ಆಹಾರ, ವ್ಯಾಯಾಮ ಮಾಡಬೇಕು’ ಎಂದರು.
ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ‘ಹೆಬ್ಬಗೋಡಿಯಲ್ಲಿ ಅಂಬರೀಷ್ ನೇತೃತ್ವದಲ್ಲಿ ಬಡಕುಟುಂಬಗಳಿಗೆ ನೆರವಾಗಿರುವುದು ಕಾರ್ಮಿಕರಿಗೆ ಉಪಯುಕ್ತವಾಗಿದೆ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕರು, ಬಡವರನ್ನು ಗುರುತಿಸಿ ನೆರವಾಗಿದ್ದೇವೆ. ಹಲವಾರು ಮಂದಿ ಸಹಾಯಹಸ್ತವನ್ನು ಚಾಚುವ ಮೂಲಕ ನೊಂದವರ ದನಿಯಾಗಿದ್ದಾರೆ’ ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ‘ಬೊಮ್ಮಸಂದ್ರ ಹೆಬ್ಬಗೋಡಿ ಕೈಗಾರಿಕಾ ಪ್ರದೇಶವಾಗಿದ್ದು ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸಾವಿರಾರು ಮಂದಿ ಸಂಕಷ್ಟದಲ್ಲಿರುವವರಿಗೆ ಕೈಜೋಡಿಸಿರುವುದು ಅರ್ಥಪೂರ್ಣವಾಗಿದೆ. ಸರ್ಕಾರ ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ನೀಡುತ್ತಿದೆ. ಆದರೆ ಇದರಿಂದ ಈ ಕುಟುಂಬಗಳು ಜೀವನ ಸಾಗಿಸುವುದು ಕಷ್ಟ. ಈ ಕುಟುಂಬಗಳು ಬಡತನ ರೇಖೆಯ ಕೆಳಗಿರುವುದರಿಂದ ಸರ್ಕಾರ ಕೊರೊನಾ ಸಂಕಷ್ಟ ಮುಗಿಯುವವರೆಗೂ ಮಾಸಿಕ ಕನಿಷ್ಠ ₹ 10 ಸಾವಿರ ಪ್ಯಾಕೆಜ್ನ್ನು ಈ ಕುಟುಂಬಗಳಿಗೆ ಘೋಷಿಸಬೇಕು’ ಎಂದರು.
ನಟ ಜಯರಾಮ್ ಕಾರ್ತಿಕ್, ಮುಖಂಡರಾದ ಹೆಬ್ಬಗೋಡಿ ಎಚ್.ಎಂ.ಅಂಬರೀಷ್, ನಾಗವೇಣಿ, ಬಿ.ಎಂ.ರಾಮಚಂದ್ರ, ಪುಟ್ಟೇಶ್ ಹಾಜರಿದ್ದರು.