ಹೊಸಕೋಟೆ: ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಮಾತ್ರ ಈ ದೇಶ ಸುರಕ್ಷಿತವಾಗಿರಲು ಸಾಧ್ಯ. ಆದ್ದರಿಂದ ಶುಕ್ರವಾರ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಮನವಿ ಮಾಡಿದರು.
‘ದೇಶದ ಸಮಗ್ರ ಏಳಿಗೆಗೆ ಬಿಜೆಪಿಯಿಂದ ಅದ್ಬುತ ಪ್ರಣಾಳಿಕೆ ನೀಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ವೈಜ್ಞಾನಿಕವಾಗಿ ಪ್ರತ್ಯೇಕ ಪ್ರಣಾಳಿಕೆ ನೀಡಿದ್ದೇನೆ. ಆ ಪ್ರಣಾಳಿಕೆಯೇ ನನಗೆ ಭಗವದ್ಗೀತೆಯಿದ್ದಂತೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನಾನು ಹಾಕಿಕೊಂಡಿರುವ ಯೋಜನೆಗಳನ್ನು ಚಾಚೂ ತಪ್ಪದೆ ಜಾರಿಗೆ ತರುತ್ತೇನೆ. ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಲ್ಲಾದರೂ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕಿದೆ’ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.
ಅಪಪ್ರಚಾರ, ಸುಳ್ಳು ಆರೋಪ, ಚಾರಿತ್ರ್ಯವಧೆ ಮಾಡುವಲ್ಲಿ ಕಾಂಗ್ರೆಸ್ ಮುಖಂಡರು ನಿಸ್ಸೀಮರು. ಚುನಾವಣಾ ತಂತ್ರ ರೂಪಿಸುವಲ್ಲು ಅನುಭವಿಗಳು, ಆದ್ದರಿಂದ ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬ ಉದ್ದೇಶದಿಂದ ನನ್ನ ಮೇಲೆ ಇಲ್ಲಸಲ್ಲದ ಆಪಾಧನೆ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತನಾಡಿ, ಈ ಚುನಾವಣೆ ದೇಶದ ಚುನಾವಣೆ, ಆಡಳಿತ ನಡೆಸಲು ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಚುನಾವಣೆ, ಆ ನಾಯಕತ್ವ ಗುಣ ಇರುವುದು ಕೇವಲ ಮೋದಿ ಅವರಿಗೆ ಮಾತ್ರ. ಆದ್ದರಿಂದ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.