ಹೊಸಕೋಟೆ: ನಗರದಲ್ಲಿ ದಿನೇ ದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಸಮಸ್ಯೆ ಒಂದೆಡೆಯಾದರೆ, ಸ್ಕೈವಾಕ್ ಬಳಕೆಗೆ ಪಾದಚಾರಿಗಳ ನಿರಾಸಕ್ತಿಯಿಂದ ರಸ್ತೆಯಲ್ಲೇ ನಿಂತು ಬ್ಯಾರಿಕೇಡ್ ಜಂಪ್ ಮಾಡುವ ಹಾಗೂ ಅದರ ಕೆಳಗೆ ತೂರುವ ಕೆಟ್ಟ ಅಭ್ಯಾಸ ರೂಢಿಸಿಕೊಂಡಿದ್ದಾರೆ.
ಇದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಆಗ್ಗಾಗೆ ಅಪಘಾಗಳು ಸಂಭವಿಸತ್ತಿದೆ.
ಪಾದಚಾರಿಗಳ ಸುಲಭ ಸಂಚಾರಕ್ಕೆ ನಗರ ಬಸ್ ನಿಲ್ದಾಣ ಬಳಿ ಸ್ಕೈವಾಕ್ ನಿರ್ಮಿಸಲಾಗಿದೆ. ಆದರೆ ಪಾದಚಾರಿಗಳು ಇದರ ಬಳಸಲು ನಿರಾಸಕ್ತಿ ತೋರುತ್ತಿದ್ದಾರೆ. ರಸ್ತೆ ದಾಟಲು ಮೆಟ್ಟಲು ಹತ್ತಿ, ಇಳಿಯಬೇಕೆಂಬ ಕಾರಣಕ್ಕೆ ಆಳು ಎತ್ತರ ಬ್ಯಾರಿಕೇಡ್ ಹತ್ತುವುದು, ಸಾಧ್ಯವಾಗದಿದ್ದರೆ, ಅದರ ಕೆಳಗೆ ನುಗ್ಗಿ ರಸ್ತೆ ದಾಟುತ್ತಿದ್ದಾರೆ.
ಸ್ಕೈವಾಕ್ನಲ್ಲಿ ಅಂಗವಿಕಲರಿಗೆ ಲಿಫ್ಟ್ ಅಳವಡಿಸದ ಕಾರಣ ಅಂಗವಿಕಲರಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಸ್ಕೈವಾಕ್ನ ಮೆಟ್ಟಿಲು ಹತ್ತಲು ಸಾಧ್ಯವಾಗದ ಕಾರಣ ಅಂಗವಿಕಲರು ಒಂದು ಕಿಲೋಮೀಟರ್ ಸುತ್ತಿಕೊಂಡು ಬರಬೇಕಾಗುತ್ತದೆ.
ನಗರ ಪ್ರದೇಶಗಳಲ್ಲಿ ಸ್ಕೈವಾಕ್ ಜತೆಗೆ ಲಿಫ್ಟ್ ಅನ್ನು ಅಳವಡಿಸಲಾಗಿರುತ್ತದೆ. ಅದೇ ರೀತಿ ಇಲ್ಲಿಯೂ ಲಿಫ್ಟ್ ಅಳವಡಿಸಬೇಕೆಂದು ಅಂಗವಿಕಲರು ಒತ್ತಾಯಿಸಿದ್ದಾರೆ.
ಅಪಘಾತ ಹೆಚ್ಚಳ: ನಗರದಲ್ಲಿ ದಿನೇ ದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಅಪಘಾತಗಳು ಹೆಚ್ಚಾಗುತ್ತಿವೆ. ಕಳೆದ ಒಂದು ವರ್ಷದಲ್ಲಿ ಬಸ್ ನಿಲ್ದಾಣದ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿ ಸುಮಾರು 20 ರಿಂದ 25 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಹಲವರು ಮಂದಿ ಅಂಗಾಂಗ ಕಳೆದುಕೊಂಡಿದ್ದಾರೆ.
ಒಂಭತ್ತು ದಿನಗಳಲ್ಲಿ ನಗರದ ಬಸ್ ನಿಲ್ದಾಣದಲ್ಲಿ ನಡೆದ ಎರಡು ಅಪಘಾತದಲ್ಲಿ ಐದು ವರ್ಷದ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಫೆ.11 ರಂದು ಕ್ಯಾಂಟರ್ ನಿಯಂತ್ರಣ ತಪ್ಪಿ ಯುವತಿಗೆ ಡಿಕ್ಕಿ ಹೊಡೆದು ಸರಣಿ ಅಪಘಾಥ ಸಂಭವಿಸಿ ಸುಧಾ(20) ಎಂಬುವವರು ಮೃತಪಟ್ಟಿದ್ದರು. ಫೆ.20ರಂದು ನಡೆದ ಅಪಘಾತದಲ್ಲಿ ಐದು ವರ್ಷದ ಹಸುಗೂಸೊಂದು ಪ್ರಾಣ ಬಿಟ್ಟಿದೆ.
ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಬ್ಯಾರಿಕೇಡ್ಗಳನ್ನು ಮತ್ತಷ್ಟು ವಿಸ್ತರಣೆ ಮಾಡಲು ಸಂಚಾರ ಪೊಲೀಸರು ತೀರ್ಮಾನಿಸಿದ್ದಾರೆ.
ಹೊಸಕೋಟೆಯಲ್ಲಿ ವಾಹನ ದಟ್ಟಣೆ, ಅಪಘಾತ ವರ್ಷಕ್ಕೆ 20–25 ಮಂದಿ ಸಾವು ಅಂಗವಿಕಲರಿಗೆ ಲಿಫ್ಟ್ ನಿರ್ಮಾಣಕ್ಕೆ ಒತ್ತಾಯ
ಬಸ್ ನಿಲುಗಡೆಗೆ ನಿರ್ದಿಷ್ಟ ಸ್ಥಳ ಗುರ್ತಿಸಿ
ಹೊಸಕೋಟೆಯಿಂದ ವಿವಿಧೆಡೆಗಳಿಗೆ ತೆರಳುವ ಪ್ರಯಾಣಿಕರಿಗೆ ಒಂದು ನಿರ್ದಿಷ್ಟ ಬಸ್ ನಿಲ್ದಾಣವಿಲ್ಲದ ಕಾರಣ ಬಸ್ಗಳು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಇದು ಸಹ ವಾಹನ ದಟ್ಟಣೆ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೆ ಪ್ರಯಾಣಿಕರು ಬಸ್ ಹತ್ತಲು ಪರದಾಡುವಂತಾಗಿದೆ. ಸಂಜೆ ವೇಳೆ ಆಂಧ್ರಪ್ರದೇಶ ತಮಿಳುನಾಡು ಕಡೆಗೆ ತೆರಳುವ ಪ್ರಯಾಣಿಕರು ಬಸ್ ಹಿಂದೆ ಓಡಬೇಕು. ಪ್ರಯಾಣಿಕರು ಒಮ್ಮೆಮ್ಮೆ ನೂರು–ಇನ್ನೂರು ಕಿಲೋಮೀಟರ್ ಓಡಿ ಹೋಗಿ ಬಸ್ ಹತ್ತಿದ ಉದಾಹರಣಗಳು ಇವೆ. ರಜೆ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಇದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ನಿರ್ದಿಷ್ಟ ಸ್ಥಳದಲ್ಲಿಯೇ ಬಸ್ ನಿಲ್ಲಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಶಿಕ್ಷಕಿ ಸರಸ್ವತಮ್ಮ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.