ಮುಳಬಾಗಿಲು: ಎಮ್ಮೇನತ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಸಂದ್ರಲ್ಲಿ ಸುಮಾರು ಒಂದು ವರ್ಷದಿಂದಲೂ ಚರಂಡಿಗಳನ್ನು ಸ್ವಚ್ಛಗೊಳಿಸಿದೆ ಚರಂಡಿಗಳಲ್ಲಿ ತ್ಯಾಜ್ಯ ಕಟ್ಟಿಕೊಂಡು ದುರ್ನಾತ ಬೀರುತ್ತಿದೆ. ಇದರಿಂದ ಮನೆಯಲ್ಲಿ ಇರಲು ಆಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಚರಂಡಿ ದುರ್ನಾತದಿಂದ ಮನೆಯಲ್ಲಿ ಇರಲೂ ಆಗುತ್ತಿಲ್ಲ. ಊಟ ಮಾಡುವುದು ಇನ್ನು ಕಷ್ಟವಾಗಿದೆ. ಗ್ರಾಮದಲ್ಲಿ 400 ಮನೆಗಳಿವೆ. ಕಾಲ ಕಾಲಕ್ಕೆ ಚರಂಡಿ ಸ್ವಚ್ಛಗೊಳಿಸುವುದನ್ನು ಗ್ರಾಮ ಪಂಚಾಯಿತಿ ಮರೆತಿದೆ. ಇದರಿಂದ ಎಲ್ಲಾ ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿಕೊಂಡು ಮಳೆ ಬಂದರೆ ಚರಂಡಿ ನೀರು ಮನೆಗಳಿಗೆ ನುಗ್ಗಿತ್ತಿದೆ. ಜತೆ ರಸ್ತೆ ಮೇಲೂ ಹರಿಯುತ್ತದೆ.
ಈ ಬಗ್ಗೆ ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೆ ಎಷ್ಟೇ ಬಾರಿ ದೂರು ಸಲ್ಲಿಸಿದರೂ, ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ಚರಂಡಿ ನೀರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಆಗ್ಗಾಗೆ ನುಗ್ಗುತ್ತಿದೆ. ಇದರಿಂದ ಅಂಗನವಾಡಿ ಕಟ್ಟಡ ಶಿಥಿಲಗೊಂಡಿದೆ. ಚರಂಡಿ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಈ ವಿಚಾರವಾಗಿ ಹಲವಾರು ಬಾರಿ ಪಿಡಿಒಗೆ ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.
ಹೀಗಾಗಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಗ್ರಾಮಸ್ಥ ಮುನಿವೆಂಕಟಪ್ಪ ತಿಳಿಸಿದರು.
ಶೀಘ್ರವೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಚರಂಡಿ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ಡಾ.ಸರ್ವೇಶ್ ತಿಳಿಸಿದರು.
ಗಣೇಶ್, ಚಿನ್ನಿ ಕೃಷ್ಣ, ಶ್ರೀರಾಮಪ್ಪ, ಶ್ರೀನಿವಾಸ್, ಚಂದ್ರಶೇಖರ್ ಇದ್ದರು.
ಗ್ರಾಮದ ಮಧ್ಯದಲ್ಲಿ ಚರಂಡಿ ನೀರು ಕುಂಟೆಯಂತೆ ಸಂಗ್ರಹವಾಗಿರುವುದು