ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಿಕ್ಷಿತರು ಕಲೆ ಉಳಿವಿಗೆ ಶ್ರಮಿಸಿ

ಮೂಡಲಪಾಯ ಯಕ್ಷ ಸಂಭ್ರಮದ ಸಮಾರೋಪ ಸಮಾರಂಭ
Last Updated 6 ಮಾರ್ಚ್ 2019, 6:53 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಮ್ಮ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಶಿಕ್ಷಿತ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಪರಂಪರೆಗೆ ಧಕ್ಕೆ ಬರದಂತೆ ಇಂದಿನ ಆಧುನಿಕತೆಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್ ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ನಗರದ ಡಾ. ರಾಜ್‍ಕುಮಾರ್ ಕಲಾಮಂದಿರದಲ್ಲಿ (ಪುರಭವನ) ನಡೆದ ಮೂಡಲಪಾಯ ಯಕ್ಷ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಆಧುನಿಕತೆ, ಮಾಧ್ಯಮಗಳ ಪ್ರಭಾವದಿಂದ ನಮ್ಮ ನೈಜ ಕಲೆ ಸಂಸ್ಕೃತಿಗಳು ನೇಪಥ್ಯಕ್ಕೆ ಸರಿ ಯುತ್ತಿವೆ. ಇವುಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಿದೆ’ ಎಂದರು.

‘ಇದಕ್ಕಾಗಿ ಸರ್ಕಾರದ ನೆರವನ್ನೇ ಅಪೇಕ್ಷಿಸದೇ ಸಮು ದಾಯವೂ ಭಾಗವಹಿಸಬೇಕಿದೆ. ಕಲೆ ನಮ್ಮ ಸಂಸ್ಕೃತಿಯ ಭಾಗ ಎಂದು ಮನಗಂಡು ಜನಸಾಮಾನ್ಯರೇ ಇದಕ್ಕೆ ವಾರಸುದಾರರಾಗಬೇಕಿದೆ’ ಎಂದರು. ಕರ್ನಾಟಕ ಯಕ್ಷಗಾನ ಅಕಾ ಡೆಮಿಯ ಅಧ್ಯಕ್ಷ ಎಂ.ಎ.ಹೆಗಡೆ ಮಾತನಾಡಿ, ಮೂಡಲಪಾಯ ಯಕ್ಷಗಾನಕ್ಕೂ ತನ್ನದೇ ಆದ ಆಸ್ಮಿತೆ ಯಿದೆ. ಈ ಪ್ರಕಾರವನ್ನು ಪ್ರದರ್ಶಿಸುವ ಕಲಾವಿದರು ವೇಷಭೂಷಣ, ಭಾಗವತಿಕೆ, ರಂಗಸಜ್ಜಿಕೆ ಇವುಗಳ ವೈಶಿಷ್ಟ್ಯ ಹೇಗಿದೆಯೋ ಹಾಗೆ ಮುಂದುವರೆಸಿಕೊಂಡು ಹೋಗ ಬೇಕಾಗಿದೆ. ಇಲ್ಲವಾದಲ್ಲಿ ಇದು ನಾಟಕ ವೆನಿಸಿಕೊಳ್ಳುತ್ತದೆ. ಸಾಂಪ್ರದಾಯಿಕತೆ ಯನ್ನು ಉಳಿಸಿಕೊಂಡು ಇಂದಿನ ಅಗತ್ಯಗಳಿಗೆ ತಕ್ಕಂತೆ ಪ್ರದರ್ಶನ ನೀಡಬೇಕು ಎಂದರು.

ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್ ಮಾತನಾಡಿ, ‘ಕಲಾವಿದರು ಪ್ರದರ್ಶಿಸುವ ಕಲೆಗಳಿಗೆ ಸಹೃದಯರ ಕೊರತೆ ಇದ್ದರೆ ಯಶಸ್ವಿಯಾಗುವುದಿಲ್ಲ. ನಮ್ಮ ನೈಜ ಕಲೆಗಳಾದ ಯಕ್ಷಗಾನ, ನಾಟಕಗಳ ಬಗ್ಗೆ ಇಂದಿನ ಪೀಳಿಗೆಗೆ ಅಭಿರುಚಿ ಬೆಳೆಸಬೇಕಿದೆ’ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ , ಸದಸ್ಯ ಸಂಚಾಲಕ ಕೆ.ಸಿ.ನಾರಾಯಣ್ ಇದ್ದರು. ಕಾರ್ಯಕ್ರಮದ ಅಂಗವಾಗಿ ಹಳಿಯಾಳದ ಸಿದ್ದಪ್ಪ ಬಿರಾದಾರ ಮತ್ತು ತಂಡದಿಂದ ಯಕ್ಷಗಾನ ಗೊಂಬೆಯಾಟ ಏಕಲವ್ಯ ಪ್ರಸಂಗ ಹಾಗೂ ಅರಳುಗುಪ್ಪೆಯ ತಿಮ್ಮಯ್ಯ ಮತ್ತು ಸಂಗಡಿಗರಿಂದ ರತಿ ಕಲ್ಯಾಣ ಮೂಡಲಪಾಯ ಯಕ್ಷಗಾನ ಪ್ರಸಂಗ ಪ್ರದರ್ಶಿತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT