ಆನೇಕಲ್: ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಕಾಶಿ ವಿಶ್ವನಾಥೇಶ್ವರ ಸ್ವಾಮಿ ಹಾಗೂ ಮಹಾ ಗಣಪತಿ ಸುಬ್ರಮಣ್ಯ ರಥೋತ್ಸವ ಸೋಮವಾರ ಸಡಗರದಿಂದ ನೆರವೇರಿತು. ಸುತ್ತಮುತ್ತಲ ನೂರಾರು ಗ್ರಾಮಸ್ಥರು ರಥೋತ್ಸವಕ್ಕೆ ಸಾಕ್ಷಿಯಾದರು.
ಅಲಂಕೃತ ರಥದಲ್ಲಿ ಗಿರಿಜಾ ಸಮೇತ ಕಾಶಿ ವಿಶ್ವನಾಥೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸಲಾಯಿತು. ದೇವಾಲಯದ ಅರ್ಚಕರು ಪೂಜೆ ನೆರವೇರಿಸಿದ ನಂತರ ರಥಕ್ಕೆ ಚಾಲನೆ ನೀಡಲಾಯಿತು.
ಕಾಶಿ ವಿಶ್ವನಾಥೇಶ್ವರ ಸ್ವಾಮಿ ರಥ ಹಾಗೂ ಗಣೇಶ, ಸುಬ್ರಮಣ್ಯ ಸ್ವಾಮಿ ರಥಗಳು ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಗಿದವು. ಎರಡು ರಥಗಳು ಸಾಗುತ್ತಿದ್ದರೆ ಸಹಸ್ರಾರು ಮಂದಿ ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೈಭವದ ರಥೋತ್ಸವವನ್ನು ಕಣ್ತುಂಬಿಕೊಂಡರು.
ಭಕ್ತರು ದವನ ಚುಚ್ಚಿದ ಬಾಳೆಹಣ್ಣನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಗ್ರಾಮದ ವಿವಿಧೆಡೆ ಅರವಂಟಿಕೆ ಸ್ಥಾಪಿಸಿ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.
ರಥೋತ್ಸವದಲ್ಲಿ ಮಹಿಳಾ ಡೊಳ್ಳುಕುಣಿತ, ವೀರಗಾಸೆ, ಗಾರುಡಿ ಗೊಂಬೆ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡು ಉತ್ಸವಕ್ಕೆ ಮೆರುಗು ನೀಡಿದವು.
ರಥೋಥ್ಸವದ ಅಂಗವಾಗಿ ಕಾಶಿ ಯಾತ್ರೆ, ಗಿರಿಜಾ ಕಲ್ಯಾಣ, ನಂದಿ ವಾಹನೋತ್ಸವ, ಧೂಳೋತ್ಸವ, ಉಯ್ಯಾಲೋತ್ಸವಗಳು ನಡೆದವು. ಮುತ್ಯಾಲಮ್ಮ ದೇವಿ ಕರಗ ಮಹೋತ್ಸವ, ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿತ್ತು.