ವಿಜಯಪುರ: ಇಲ್ಲಿನ ಗೌರಿಶಂಕರ ಚಿತ್ರಮಂದಿರದಲ್ಲಿ ಚಲನಚಿತ್ರ ಕೆ.ಜಿ.ಎಫ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಚಿತ್ರನಟ ಯಶ್ ಅಭಿಮಾನಿಗಳು ಬೃಹತ್ ಕಟೌಟ್ಗಳನ್ನು ನಿಲ್ಲಿಸಿ, ಅನ್ನದಾನ ಮಾಡಿದರು.
ಇಲ್ಲಿನ ಬಸ್ ನಿಲ್ದಾಣದಲ್ಲಿ ಬೃಹತ್ ಕಟೌಟ್ ನಿಲ್ಲಿಸಿ, ಪೂಜೆ ಸಲ್ಲಿಸಿದ ನಂತರ ಜನರಿಗೆ ಅನ್ನದಾನ ಮಾಡಿದರು.
ಚಿತ್ರಮಂದಿರದ ಆವರಣದಲ್ಲಿ ಗುರುವಾರ ಕಟೌಟ್ಗಳನ್ನು ಕಟ್ಟಿ, ಚಿತ್ರ ಬಿಡುಗಡೆಗೆ ಶುಭ ಕೋರಿದ್ದರು. ಬೆಳಿಗ್ಗೆ ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಚಲನಚಿತ್ರ ಶತದಿನ ಪೂರೈಸಬೇಕು ಎಂದು ಹರಸಿದರು.
ಚಿತ್ರಮಂದಿರವನ್ನು ಹೂಗಳಿಂದ ಅಲಂಕಾರ ಮಾಡಿದ್ದರು. ಬೆಳಿಗ್ಗೆ 7 ಗಂಟೆಗೆ ಅಭಿಮಾನಿಗಳಿಗಾಗಿ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಚಿತ್ರ ವೀಕ್ಷಣೆ ಮಾಡಿದ ಅವರು, ‘ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಶತದಿನ ಕಾಣುತ್ತದೆ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು 5 ಪ್ರದರ್ಶನಗಳು ನಡೆಯಲಿದೆ. ಜನರು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಚಿತ್ರಮಂದಿರದ ವ್ಯವಸ್ಥಾಪಕ ನಾರಾಯಣಸ್ವಾಮಿ ತಿಳಿಸಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಿತ್ರಮಂದಿರದ ಸಮೀಪದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.