ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯ ಕುರುಬ ಸಂಘದಿಂದ ಮೂರು ನಿರ್ದೇಶಕ ಸ್ಥಾನಕ್ಕೆ ಡಿ. 22ರಂದು ಚುನಾವಣೆ ನಡೆಯಲಿದ್ದು, ಸಮುದಾಯದ ಮತದಾರರು ಆಯ್ಕೆಮಾಡಬೇಕು ಎಂದು ನಿರ್ದೇಶಕ ಸ್ಥಾನದ ಸ್ಪರ್ಧಿ ಕೇಶವಮೂರ್ತಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಮತ್ತು ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ನನ್ನ ಜತೆ ಸಹಪಾಠಿಗಳಾದ ಕೃಷ್ಣಮೂರ್ತಿ, ಎನ್.ಮಂಜುಳಾ ಒಂದೇ ಸಿಂಡಿಕೇಟ್ ಅಡಿಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಜಿಲ್ಲಾ ಕುರುಬರ ಸಂಘದ ಕಾರ್ಯಕಾರಿ ಸಮಿತಿ ವತಿಯಿಂದ ಒಮ್ಮತದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರೂ ಇನ್ನೊಂದು ಬಣ ಪ್ರತಿಸ್ಪರ್ಧಿಯಾಗಿದೆ. ನಾಲ್ಕು ತಾಲ್ಲೂಕಿನಿಂದ ನೋಂದಾಯಿತ ಒಟ್ಟು 4,360 ಮತದಾರರು ಇದ್ದಾರೆ. ಡಿ.22ರಂದು ದೇವನಹಳ್ಳಿ ತಾಲ್ಲೂಕು ಚಪ್ಪರದ ಕಲ್ಲುಬಳಿ ಇರುವ ವಿಹಾನ್ ಶಾಲೆಯಲ್ಲಿ ಮತದಾನ ನಡೆಯಲಿದೆ ಎಂದು ಹೇಳಿದರು.
ಕುರುಬರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ‘ಸಮುದಾಯದ ಸಂಘದಲ್ಲಿ ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ ಪ್ರಸ್ತುತ ಜಿಲ್ಲಾ ಘಟಕ ಅಧ್ಯಕ್ಷನಾಗಿ ಸಮುದಾಯದ ಭವನ, ಶೈಕ್ಷಣಿಕ ಪ್ರೋತ್ಸಾಹ, ಸಮುದಾಯದ ಸಂಘಟನೆ ಮಾಡಿದ್ದೇನೆ. ಆರೇಳು ವರ್ಷಗಳಿಂದ ಸಂಘವನ್ನು ಆರ್ಥಿಕ ಶಕ್ತಿಯನ್ನಾಗಿ ಬೆಳೆಸಿದ್ದೇನೆ. ಈವರೆಗೆ ಯಾವುದೇ ಕಪ್ಪುಚುಕ್ಕೆ ಇಲ್ಲ, ಸಮುದಾಯ ಮತನೀಡಿ ಆಯ್ಕೆಮಾಡಿದರೆ ಮತ್ತಷ್ಟು ಸಂಘಟನಾತ್ಮಕವಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ನಿರ್ದೇಶಕಿ ಸ್ಥಾನದ ಸ್ಪರ್ಧಿ ಎನ್.ಮಂಜುಳಾ ಮಾತನಾಡಿದರು. ಪುರಸಭೆ ಸದಸ್ಯ ರವೀಂದ್ರ, ಕುರುಬರ ಸಂಘ ತಾಲ್ಲೂಕು ಘಟಕ ಗೌರವಾಧ್ಯಕ್ಷ ಮುನಿನಂಜಪ್ಪ, ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ರಮೇಶ್, ಮಹಿಳಾ ಘಟಕ ತಾಲ್ಲೂಕು ಅಧ್ಯಕ್ಷೆ ಶಶಿಕಲಾ, ಪ್ರಧಾನ ಕಾರ್ಯದರ್ಶಿ ಮಹಾದೇವಿ ಇದ್ದರು.