ವಿಜಯಪುರ:ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಾಮಾಜಿಕ ಜಾಲತಾಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಅಬ್ಬರದ ನಡುವೆಯೂ ದಿನಪತ್ರಿಕೆಗಳು ಸಮಾಜದಲ್ಲಿ ಎಲ್ಲ ಜಾತಿ, ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಭಾರತೀಯ ಸೀನಿಯರ್ ಛೇಂಬರ್ ಅಧ್ಯಕ್ಷ ಜಯರಾಂ ಹೇಳಿದರು.
ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ಮನೆಯಲ್ಲಿ ಜೆಸಿಐ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಭಾರತೀಯ ಸೀನಿಯರ್ ಛೇಂಬರ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರುಮಾತನಾಡಿದರು.
ಪತ್ರಿಕಾ ರಂಗಕ್ಕೆ ಇರುವ ಸ್ವಾತಂತ್ರ್ಯವನ್ನು ದುರುಪಯೋಗವಾಗದಂತೆ ನೋಡಿಕೊಂಡಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಜತೆಗೆ ಜನರನ್ನು ಜಾಗೃತರನ್ನಾಗಿ ಮಾಡಲು ಅವಕಾಶವಾಗುತ್ತದೆ. ಸ್ಥಳೀಯವಾಗಿ ವರದಿಗಾರರು ರಂಜನೀಯ ಸುದ್ದಿಗಳಿಗೆ ಒತ್ತು ಕೊಡುವುದರ ಬದಲಿಗೆ ಸಮಾಜದ ಪರಿವರ್ತನೆಗಾಗಿ ಅಗತ್ಯವಾಗಿರುವ ಸುದ್ದಿ ಬರೆಯುವುದರ ಮೂಲಕ ಜನರಿಗೆ ಹತ್ತಿರವಾಗಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ಮಾತನಾಡಿ, ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಮಾಧ್ಯಮಗಳು ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರನ್ನು ಜಾಗೃತಗೊಳಿಸುವುದರ ಜತೆಗೆ ತಮ್ಮ ಪ್ರಾಣ ಲೆಕ್ಕಿಸದೆ, ಸಮಾಜವನ್ನು ಆರೋಗ್ಯದ ಕಡೆಗೆ ಕೊಂಡೊಯ್ಯುವಂತಹ ಕೆಲಸ ಮಾಡಿವೆ ಎಂದರು.
ಜೆಸಿಐ ಅಧ್ಯಕ್ಷ ರವೀಂದ್ರ, ಜೆ.ಆರ್. ಮುನಿವೀರಣ್ಣ, ಮುನಿವೆಂಕಟರವಣಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್, ಡಾ.ಶಿವಕುಮಾರ್, ಜನಾರ್ದನ್, ಎಸ್.ಆರ್.ಎಸ್. ಬಸವರಾಜು, ಕೋರಮಂಗಲ ಭೈರೇಗೌಡ, ವೆಂಕಟೇಶ್, ಶಾಮಣ್ಣ ಹಾಜರಿದ್ದರು.