ಹೊಸಕೋಟೆ: ರಾಜ್ಯದಲ್ಲಿ ಸದಾಶಿವ ಆಯೋಗದ ವರದಿ ಜಾರಿಯಾದರೆ ಮಾದಿಗ ಜನಾಂಗದ ವಿದ್ಯಾವಂತ ಯುವಕರಿಗೆ ಉನ್ನತ ಹುದ್ದೆಗಳು ದೊರಕಿ ಸಮಾಜದಲ್ಲಿ ಮುಂದೆ ಬರುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಮಾದಿಗ ಚೈತನ್ಯ ರಥಯಾತ್ರೆಯ ಸಂಚಾಲಕ ಹೆಣ್ಣೂರು ಲಕ್ಷ್ಮಿನಾರಾಯಣ ಆಗ್ರಹಿಸಿದರು.
ನಗರಕ್ಕೆ ಆಗಮಿಸಿದ ರಥಯಾತ್ರೆ ಅಂಗವಾಗಿ ನಡೆದ ಬೃಹತ್ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳೂ ನಮಗೆ ಅನ್ಯಾಯ ಮಾಡಿವೆ. ಯಾವುದೇ ಮುಖ್ಯಮಂತ್ರಿಯೂ ನಮಗೆ ಸರಿಯಾದ ಸ್ಥಾನಮಾನ ನೀಡುವಲ್ಲಿ ವಿಫಲರಾಗಿದ್ದಾರೆ. ಅದಕ್ಕಾಗಿ ಮಾರ್ಚ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಾದಿಗ ವಿರಾಟ್ ಶಕ್ತಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅದರ ಜಾಗೃತಿಗಾಗಿ ರಾಜ್ಯದಾದ್ಯಂತ ಮಾದಿಗ ಚೈತನ್ಯ ರಥಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಹೊಸಕೋಟೆಯ ಮುಖಂಡ ಸುಬ್ಬರಾಜು ಮಾತನಾಡಿದರು. ಸಭೆಯಲ್ಲಿ ಹರಿರಾಮ್, ಮುನಿಕೃಷ್ಣ, ನಾರಾಯಣಸ್ವಾಮಿ, ಗುಟ್ಟಹಳ್ಳಿ ನಾಗರಾಜ್, ವಿಜಯ್ ಕುಮಾರ್ ಭಾಗವಹಿಸಿದ್ದರು. ಯಾತ್ರೆಯಲ್ಲಿ ಆಗಮಿಸಿದ ರಥಕ್ಕೆ ಹಾಗೂ ಮುಖಂಡರಿಗೆ ಬೃಹತ್ ಸೇಬಿನ ಹಾರ ಹಾಕಲಾಯಿತು.