ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾದಗೊಂಡನಹಳ್ಳಿಯಲ್ಲಿ ಶನಿವಾರ ವ್ಯಕ್ತಿಯೊಬ್ಬ ತನ್ನನ್ನು ನೋಡಿ ಬೊಗಳಿದ ನಾಯಿಯನ್ನು ಏರ್ಗನ್ನಿಂದ ಶೂಟ್ ಮಾಡಿ ಸಾಯಿಸಿದ್ದಾನೆ.
ಮಾದಗೊಂಡನಹಳ್ಳಿಯ ಕೃಷ್ಣಪ್ಪ ಎಂಬ ವ್ಯಕ್ತಿ ಹರೀಶ್ ಎಂಬುವರ ಸಾಕುನಾಯಿ ‘ರಾಕಿ’ ತನ್ನನ್ನು ನೋಡಿ ಬೊಗಳಿತು ಎಂದು ಕೋಪಗೊಂಡು ಶೂಟ್ ಮಾಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಗುಂಡಿನ ಶಬ್ದದಿಂದ ತಪ್ಪಿಸಿಕೊಂಡು ಓಡಿಹೋದ ನಾಯಿಯನ್ನು ರಾಗಿಯ ಹೊಲದಲ್ಲಿ ಅಟ್ಟಾಡಿಸಿಕೊಂಡು ಕೃಷ್ಣಪ್ಪ ಶೂಟ್ ಮಾಡಿದ್ದಾರೆ. ಏಳೆಂಟು ಗುಂಡು ತಿಂದ ಐದು ವರ್ಷದ ರಾಕಿ ಸಾವನ್ನಪ್ಪಿದೆ’ ಎಂದು ನಾಯಿಯ ಮಾಲೀಕ ಹರೀಶ್ ದೂರಿನಲ್ಲಿ ತಿಳಿಸಿದ್ದಾರೆ.
‘ಈ ನಾಯಿ ನನ್ನ ಮಗನನ್ನು ಕಚ್ಚಿದೆ, ಅದಕ್ಕೆ ಕೊಂದಿದ್ದೇನೆ. ಬೇಕಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದು ಕೃಷ್ಣಪ್ಪ ಸವಾಲು ಹಾಕಿದ್ದಾರೆ’ ಎಂದು ಹರೀಶ್ ಹೇಳಿದ್ದಾರೆ.