ನಗರದ ನಡುವಿನಿಂದ ಹಾದು ಹೋಗಿರುವ ರಾಜ್ಯ ಹೆದ್ದಾರಿಯಿಂದ ಒಂದೂವರೆಗೆ ಕಿ.ಮೀ. ಅಂತರದಲ್ಲಿದೆ ಈ ಆಶ್ರಯ ಕಾಲೊನಿ. ಇಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಸ್ವಲ್ಪ ಮಳೆಯಾದರೂ ರಸ್ತೆ ಕೆಸರುಗದ್ದೆಯಾಗುತ್ತದೆ. ಸಂಚಾರ ಸಂಕಟವಾಗುತ್ತದೆ. ಇಲ್ಲಿನ ಗುಂಡಿಗಳ ನಡುವಿನಿಂದಲೇ ವಾಹನಗಳು ಸಾಗಿ, ಈ ಗುಂಡಿಗಳು ಗಾತ್ರದಲ್ಲಿ ದೊಡ್ಡದಾಗಿವೆ. ಮಳೆಯಾದರೆ ಇಲ್ಲಿ ನೀರು ನಿಂತುಕೊಳ್ಳುತ್ತದೆ. ಇಡೀ ಬಡಾವಣೆ ಜಲಾವೃತಗೊಳ್ಳುತ್ತದೆ. ರಾತ್ರಿ ವೇಳೆ ವೃದ್ಧರು, ಮಹಿಳೆಯರು, ಮಕ್ಕಳು ಗುಂಡಿಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ‘ಇಲ್ಲಿನ ರಸ್ತೆಯಲ್ಲಿ ನಡೆಯಬೇಕಾದರೆ, ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಳ್ಳಬೇಕು. ಇಲ್ಲದಿದ್ದರೆ ಗುಂಡಿಯಲ್ಲಿ ಬೀಳುವುದು ಖಾತರಿ’ ಎಂದು ಅಲ್ಲಿನ ನಿವಾಸಿಗಳು ಹೇಳಿದರು.