ದೊಡ್ಡಬಳ್ಳಾಪುರ: ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಭಾನುವಾರ ಜಾನುವಾರು ಮೇಯಿಸುತ್ತಿದ್ದ ತಾಯಿ–ಮಗ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕೋಳೂರು ಗ್ರಾಮದ ರೂಪಾ (35), ಅವರ ಮಗ ಹೇಮಂತ್ (9) ಮೃತಪಟ್ಟವರು.
ಫಾಲನೇತ್ರ ಎಂಬುವವರಿಗೆ ಸೇರಿರುವ ಕೃಷಿ ಹೊಂಡದ ಬದುವಿನ ಮೇಲೆ ಆಟವಾಡುತ್ತಿದ್ದ ಹೇಮಂತ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.