ನೆಲಮಂಗಲ: ವಾಹನ ದಟ್ಟಣೆ ಉಂಟಾಗುತ್ತದೆ ಎಂದು ರಸ್ತೆ ಬದಿ ವ್ಯಾಪಾರಿಗಳನ್ನು ಹಾಗೂ ಅಂಗಡಿಗಳ ಮಾಲೀಕರು ಮಾಡಿಕೊಂಡಿದ್ದ ಒತ್ತುವರಿಯನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ಪಟ್ಟಣದ ಸೊಂಡೇಕೊಪ್ಪ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರು, ರಸ್ತೆಗೆ ಅಂಗಡಿ ವಿಸ್ತರಿಸಿಕೊಂಡವನ್ನು ನಗರಸಭೆ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಪೊಲೀಸರ ಸಹಾಯದಿಂದ ತೆರವುಗೊಳಿಸಿದರು. ತಳ್ಳುಗಾಡಿಗಳನ್ನು ಕಸದ ಗಾಡಿಯಲ್ಲಿ ತುಂಬಿಸಿದರು.
‘ಇಲ್ಲೇ ಏಕೆ ತೆರವು ಮಾಡುತ್ತಿದ್ದೀರಿ? ಎಲ್ಲ ಕಡೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಬಡವರಿಗೆ ಅನ್ಯಾಯ ಮಾಡುತ್ತಿದ್ದೀರಿ’ ಎಂದು ಸ್ಥಳೀಯರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದರು.
ಅಂಗಡಿಗಳ ಮುಂದೆ ಇದ್ದ ಸಾಮಗ್ರಿಗಳನ್ನು ಕೂಡ ಅಧಿಕಾರಿಗಳು ತೆರವುಗೊಳಿಸಿದರು. ‘ರಸ್ತೆಯನ್ನು ಅಳತೆ ಮಾಡಬೇಕು. ಎಲ್ಲಿಯವರೆಗೆ ರಸ್ತೆ ಇದೆ? ಎಲ್ಲಿ ಪಾದಚಾರಿ ಮಾರ್ಗ ಇದೆ ಎಂಬುದನ್ನು ಗುರುತಿಸಿ ನೋಟಿಸ್ ನೀಡಿದರೆ ಅನುಕೂಲವಾಗುತ್ತದೆ. ಮೊದಲು ಪಾದಚಾರಿ ಮಾರ್ಗ ನಿರ್ಮಾಣ ಮಾಡಿ. ಈಗಾಗಲೇ ರಸ್ತೆ ವಿಸ್ತರಣೆಯಿಂದ ನಾವು ಸಾಕಷ್ಟು ಜಾಗ ಕಳೆದುಕೊಂಡಿದ್ದೇವೆ. ಹೀಗೆ ಏಕಾಏಕಿ ಬಂದು ತೆರವುಗೊಳಿಸಿದರೆ ಬಡವರ, ವ್ಯಾಪಾರಸ್ಥರ ಗತಿ ಏನು’ ಎಂದು ವಾಣಿಜ್ಯ ಮಳಿಗೆಯ ಮಾಲಿಕ ಸಂತೋಷ್ಕುಮಾರ್ ಪ್ರಶ್ನಿಸಿದರು.