ಹೊಸಕೋಟೆ: ಇಲ್ಲಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ನೇತೃತ್ವದಲ್ಲಿ ನಡೆದ ಕಲಿಕಾ ಪರವಾನಗಿ (ಎಲ್.ಎಲ್) ಹಾಗೂ ವಿಮಾ ಮೇಳದಲ್ಲಿ ಜನ ಸಾಗರವೇ ಸೇರಿತ್ತು.
ಬೆಳಿಗ್ಗೆ 9 ಗಂಟೆಗೆ ಪ್ರಾರಂಭವೆಂದು ತಿಳಿಸಿದ್ದ ಮೇಳವು ತಡವಾಗಿ ಪ್ರಾರಂಭವಾಯಿತು. ಆದರೂ ಜನರು ಸರತಿ ಸಾಲುಗಳಲ್ಲಿ ನಿಂತು ಕಾಯುತ್ತಿದ್ದರು.
ವಿವಿಧ ವಿಮಾ ಕಂಪನಿಯವರು ಸ್ಟಾಲ್ ಮೂಲಕ ಜನರಿಗೆ ವಿವರಣೆ ಹಾಗೂ ವಿಮೆ ಮಾಡಿಕೊಟ್ಟರು. ಜನರ ವಿವಿಧ ಸಂದೇಹಗಳಿಗೆ ವಿವರ ಕೊಡುವುದರಲ್ಲಿ ಪೊಲೀಸ್ ಸಿಬ್ಬಂದಿ ಸುಸ್ತಾದರು.
ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಮಾಡಬೇಕಾಯಿತು. ವಯಸ್ಸಾದವರೂ ಸರತಿ ಸಾಲಿನಲ್ಲಿ ಬರುತ್ತಿದ್ದುದು ಕೆಂದ್ರ ಸರ್ಕಾರದ ದುಬಾರಿ ದಂಡದ ಪರಿಣಾಮವನ್ನು ತೋರಿಸುವಂತಿತ್ತು.
ಸಂಜೆ ಕಾರ್ಯಕ್ರಮವನ್ನು ಬಲವಂತವಾಗಿ ಮುಗಿಸುವಂತಹ ಸ್ಥಿತಿ ನಿರ್ಮಾಣವಾಯಿತು. ಒಟ್ಟು 9 ಸಾವಿರ ಜನರು ಅರ್ಜಿಗಳನ್ನು ಕೊಟ್ಟಿದ್ದು ಅದರಲ್ಲಿ 600 ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಳದ ಪರಿಣಾಮ ಕ್ರೀಡಾಂಗಣದ ಮುಂದೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.