ಹೊಸಕೋಟೆ: ‘66 ವರ್ಷಗಳ ಹಿಂದೆ ಸ್ಥಾಪಿತವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಸಮಾಜ ಸುಧಾರಣೆಗಾಗಿ ಹಲವು ಚಿಂತಕರ ತತ್ವಾದರ್ಶದಂತೆ ಕೆಲಸ ಮಾಡುತ್ತಿದೆ. ಇದೊಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಿದ್ಧಗೊಂಡಿದೆ’ ಎಂದು ಆರ್ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ ತಿಳಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷ ಎರಡು ಇದ್ದರಷ್ಟೇ ಪ್ರಜಾತಂತ್ರ ವ್ಯವಸ್ಥೆಯ ಉಳಿವು ಸಾಧ್ಯ. ರಾಮ ಮನೋಹರ ಲೋಹಿಯಾ, ಪೆರಿಯಾರ್ ರಾಮಸ್ವಾಮಿ ಅವರ ಮಾತುಗಳು ರಾಜಕೀಯ ಚಿಂತನೆಯಾಗಿ ಮಾರ್ಪಾಡು ಆಗಬೇಕಿದೆ ಎಂದರು.
ಪಕ್ಷದ ತಾಲ್ಲೂಕು ಅಧ್ಯಕ್ಷ ದರ್ಶನ್ ಮಾತನಾಡಿ, ಸಾರಿಗೆ ನೌಕರರು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರ ಹೋರಾಟವನ್ನು ಪಕ್ಷ ಬೆಂಬಲಿಸುತ್ತದೆ. ಸರ್ಕಾರದ ಭ್ರಷ್ಟ ವ್ಯವಸ್ಥೆಯನ್ನು ಧಿಕ್ಕರಿಸಿ ಸುಂದರ ಸಮಾಜ ನಿರ್ಮಾಣ ಮಾಡುವುದು ನಮ್ಮ ಧ್ಯೇಯ ಎಂದು ತಿಳಿಸಿದರು.
ಪಕ್ಷದ ಮುಖಂಡ ಲಘುಮಯ್ಯ, ಜಿಲ್ಲಾ ಕಾರ್ಯಧ್ಯಕ್ಷ ಎ. ಮುನಿರಾಜು, ದಲಿತ ಸಂಘಟನೆ ಸಮಿತಿಯ ರಾಜ್ಯ ಸಂಯೋಜಕರಾದ ಅಶ್ವಥ್, ವೆಂಕಟರಮಣಪ್ಪ, ಮುಖಂಡರಾದ ಉಮಲು ನಾಗರಾಜ್, ಚಂದ್ರಶೇಖರ್, ಅಮ್ಜದ್, ರೂಪಕಲಾ, ರವಿ, ವಿಜಯೇಂದ್ರ, ರಾಜಪ್ಪ, ಅಪ್ಪಸಂದ್ರ ನಾಗೇಶ್ ಹಾಗೂ ಮುಖಂಡರು ಹಾಜರಿದ್ದರು.