ದೊಡ್ಡಬಳ್ಳಾಪುರ: ತಾಲ್ಲೂಕಿನ ನಂದಿಬೆಟ್ಟದ ಸಾಲಿನ ಚನ್ನರಾಸ್ವಾಮಿ ಬೆಟ್ಟದಲ್ಲಿ ಜಾಲಾರಿ ಮರಗಳು ಹೂವುಗಳಿಂದ ಮೈದುಂಬಿ ನಿಂತಿದ್ದು ನೋಡಗರ ಕಣ್ಮನ ಸೆಳೆಯುತ್ತಿದೆ.
ರಾಜ್ಯದ ಕೆಲವೇ ಬೆಟ್ಟಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಬಗೆ ಜಾಲಾರಿ ಮರಗಳು ಚನ್ನರಾಯಸ್ವಾಮಿ ಬೆಟ್ಟದಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಹೂವುಗಳಿಂದ ತುಂಬಿರುವ ಮರಗಳನ್ನು ನೋಡಲಷ್ಟೇ ಅಲ್ಲದೆ ಹೂವುಗಳಿಂದ ಬರುವ ಸುವಾಸನೆಯೂ ರಸಿಕರನ್ನು ಸಹ ಸೂಜಿಗಲ್ಲಿನಂತೆ ಸೆಳೆಯುತ್ತವೆ.
ಇಡೀ ತಾಲ್ಲೂಕಿನಲ್ಲಿಯೇ ಚನ್ನರಾಯಸ್ವಾಮಿ ಬೆಟ್ಟ ಮಳೆಗಾಲದಲ್ಲಿ ನೀರಿನ ಝರಿಗಳು, ಜಲಪಾತ ಹೊಂದಿರುವುದರಿಂದ ಜನರನ್ನು ತನ್ನತ್ತ ಸೆಳೆದರೆ, ಬೇಸಿಗೆಯಲ್ಲಿ ಇಲ್ಲಿನ ಜಾಲಾರಿ ಮರಗಳು ಸೇರಿದಂತೆ ವಿವಿಧ ಔಷಧಿ ಸಸ್ಯ ಸಂಪತ್ತು ಪರಿಸರ ಪ್ರಿಯರನ್ನು, ಚಾರಣಿಗರನ್ನು ಬೆಟ್ಟಕ್ಕೆ ಬರುವಂತೆ ಮಾಡುತ್ತದೆ.
ಚನ್ನರಾಯಸ್ವಾಮಿ ಬೆಟ್ಟದಲ್ಲಿ ಅಪರೂಪದ ಜಾಲಾರಿ ಮರಗಳು ಹಾಗೂ ಔಷಧಿ ಸಸ್ಯ ಸಂಪತ್ತು ಇರುವುದರಿಂದ ಬೇಸಿಗೆಯಲ್ಲಿ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿ ಬೆಟ್ಟಕ್ಕೆ ಬೆಂಕಿ ಬೀಳದಂತೆ ನಿಗಾವಹಿಸಬೇಕು ಎನ್ನುವುದು ಬಹುದಿನಗಳ ಆಗ್ರಹ.
ಆದರೆ, ಬೆಟ್ಟಕ್ಕೆ ಬೆಂಕಿ ಬೀಳುವುದು ಮಾತ್ರ ತಪ್ಪಿಲ್ಲ. ಚನ್ನರಾಯಸ್ವಾಮಿ ಬೆಟ್ಟ ಇಕೋ ಟೂರಿಸಂ ವ್ಯಾಪ್ತಿಗೆ ಒಳಪಟ್ಟಿದೆ. ಚಾರಣಿಗರು ಬೆಟ್ಟ ಹತ್ತಲು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡೇ ಬರಬೇಕಿದೆ. ಇಷ್ಟಾದರೂ ಸಹ ಬೆಟ್ಟವನ್ನು ಮತ್ತಷ್ಟು ಹಸಿರೀಕರಣಗೊಳಿಸಲು ಹಾಗೂ ಈಗ ಇರುವ ಸಸ್ಯ ಸಂಪತ್ತು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಹೆಚ್ಚಿನ ಕಾಣಜಿವಹಿಸಬೇಕಿದೆ ಎನ್ನುತ್ತಾರೆ ಇಕೋಟೂರಿಸಂ ಮಾರ್ಗದರ್ಶಕ ಚಿದಾನಂದ್.