‘ಚಳಿಗಾಲದಲ್ಲಿ ರೇಷ್ಮೆಗೂಡು ಖರೀದಿಯಲ್ಲಿ ಪೈಪೋಟಿ ಇರುತ್ತದೆ. ರೈತರಿಗೆ ಉತ್ತಮ ಬೆಲೆಯೂ ಸಿಗುತ್ತದೆ. ಆದರೆ ಈಗ ಬೇಡಿಕೆಗೆ ತಕ್ಕಂತೆ ಗೂಡು ಸಿಗುತ್ತಿಲ್ಲ. ಬಿಚ್ಚಾಣಿಕೆ ಘಟಕದಲ್ಲಿ ಕಾರ್ಮಿಕರಿಗೆ ಮುಂಗಡ ಹಣ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದ್ದೇವೆ. ಇದೀಗ ಅವರಿಗೆ ಕೆಲಸ ಇಲ್ಲದಂತಾಗಿದೆ. ಒಂದೊಮ್ಮೆ ಗೂಡಿನ ಕೊರತೆಯಿಂದ ಘಟಕ ಬಂದ್ ಆದರೆ ಅವರಿಗೂ ಕಷ್ಟ’ ಎಂದು ರೀಲರ್ ಬಾಬಾಜಾನ್ ಹೇಳುತ್ತಾರೆ.
‘40 ವರ್ಷಗಳಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ. ಬಹಳಷ್ಟು ಕಾರ್ಮಿಕರನ್ನೂ ನೇಮಿಸಿಕೊಂಡಿದ್ದೇನೆ. ಚಳಿಗಾಲದಲ್ಲಿ ರೈತರು ಗೂಡು ಬೆಳೆಯಲು ಎಷ್ಟು ಕಷ್ಟ ಪಡುತ್ತಾರೋ, ನಾವೂ ಅಷ್ಟೇ ಕಷ್ಟ ಅನುಭವಿಸಿ ನೂಲು ಬಿಚ್ಚಾಣಿಕೆ ಮಾಡುತ್ತೇವೆ. ಬೇಸಿಗೆಯಲ್ಲಿ ಉದ್ಯಮಕ್ಕೆ ತೊಂದರೆಯಾಗುತ್ತಿದೆ. ಗೂಡು ಖರೀದಿ ಮಾಡಲು ಕೈಯಲ್ಲಿ ಹಣ ಇಲ್ಲದಿದ್ದರೂ ಸಾಲ ಮಾಡಿಯಾದರೂ ಗೂಡು ಖರೀದಿಸಬೇಕು’ ಎನ್ನುತ್ತಾರೆ ರೀಲರ್ ಅಕ್ಮಲ್ ಪಾಷ.