ದೊಡ್ಡಬಳ್ಳಾಪುರ: ನಗರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಇಂಧನ ಇಲಾಖೆ ವತಿಯಿಂದ ಸೋಲಾರ್ ಪಾರ್ಕ್ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ. ಕ್ಯಾಂಪಸ್ಗೆ ಅಗತ್ಯ ಇರುವ ವಿದ್ಯುತ್ ಇಲ್ಲಿಯೇ ಉತ್ಪಾದನೆ ಮಾಡಿಕೊಳ್ಳಲಾಗುವುದು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಅವರು ಹೇಳಿದರು.
ನಗರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕೋವಿಡ್ ಸಮಯದಲ್ಲಿಯೂ 20 ಸಾವಿರ ಶಿಕ್ಷಕರಿಗೆ ವರ್ಚುಯಲ್ ಮೂಲಕ ತರಬೇತಿ ನೀಡಲಾಗಿದೆ. ವಿವಿಧ ಸೇವಾ ಕಾರ್ಯ ಮಾಡುವ ಮೂಲಕ ಸಕ್ರಿಯವಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ನ ಚಟುವಟಿಕೆ ಜುಲೈ ತಿಂಗಳಿನಿಂದ ಭೌತಿಕವಾಗಿ ಹಿಂದಿನಂತಯೇ ಆರಂಭಗೊಳ್ಳಲಿವೆ. ಮಾರ್ಚ್ 2020ರಿಂದ ಆರಂಭವಾದ ಲಾಕ್ಡೌನ್ ಹಾಗೂ ಸಭೆ ಸಮಾರಂಭಗಳಿಗೆ ನಿರ್ಬಂಧದ ಹಿನ್ನೆಲೆಯಲ್ಲಿ ವರ್ಚುಯಲ್ ಮೂಲಕ 150ಕ್ಕೂ ಹೆಚ್ಚು ಕಾರ್ಯಕ್ರಮ ನಡೆದಿದೆ ಎಂದರು.
ವೆಬಿನಾರ್ನಲ್ಲಿ ಹಲವಾರು ಗಣ್ಯರು ಭಾಗವಹಿಸಿ ಮಾರ್ಗದರ್ಶನ ನೀಡಿದ್ದಾರೆ. ಎರಡುವರೆ ಸಾವಿರ ಉಪ ನ್ಯಾಸಕರಿಗೆ ತರಬೇತಿ ನೀಡಲಾಗಿದೆ. ತರಬೇತಿ ಶಿಕ್ಷಕರಿಗೆ ₹1 ಸಾವಿರ ಗೌರವ ಧನ ನೀಡಲಾಗುತ್ತಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ 35 ಲಕ್ಷಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ವಿತರಿಸಲಾಗಿದೆ. ಆರೋಗ್ಯ ಇಲಾಖೆ ಇನ್ನೂ 6 ತಿಂಗಳು ಮಾಸ್ಕ್ ಧರಿಸಲು ಸೂಚಿಸಿರುವುದರಿಂದ ಒಂದು ಕೋಟಿ ಮಾಸ್ಕ್ ತಯಾರಿಸುವ ಗುರಿ ಹೊಂದಲಾಗಿದೆ. ಕೋವಿಡ್ ಸಮಯದಲ್ಲಿ ಸಂಘಟನೆಯಿಂದ ವಲಸೆ ಕೂಲಿ ಕಾರ್ಮಿಕರಿಗೆ ನೆರವು, ಮನೆ ಮನೆ ಭೇಟಿ ಮಾಡಿ ಸಹಾಯ ನೀಡುವ ಕಾರ್ಯ ಮಾಡಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ 10 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರ ಸಹಕಾರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಬಿಬಿಎಂಪಿ ನೋಡಲ್ ಅಧಿಕಾರಿ ಎಂ.ಎ.ಚೆಲ್ಲಯ್ಯ,ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರಭಟ್,ತರಬೇತಿ ಸಹಾಯಕ ಆಯುಕ್ತ ಅರುಣಮಾಲಾ, ಶಿಬಿರದ ಸಲಹೆಗಾರ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಇತರರು ಇದ್ದರು.