ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ಕ್ರೀಡಾಕ್ಷೇತ್ರ ಬೆಳವಣಿಗೆಗೆ ಪ್ರೋತ್ಸಾಹ ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂಗ ಸಂಸ್ಥೆಯಾದ ಜನಜಾಗೃತಿ ಸಂಸ್ಥೆ ಜಿಲ್ಲಾ ಘಟಕ ಉಪಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಅಭಿಪ್ರಾಯಟ್ಟರು.
ಇಲ್ಲಿನ ಬೋಧಿಸತ್ವ ಅನುದಾನಿತ ಪ್ರೌಢಶಾಲೆ ಆವರಣದಲ್ಲಿ ವಾಲಿಬಾಲ್ ಪಂದ್ಯಾವಳಿ ವಿಜೇತರಿಗೆ ಕಾಯ್ದಿರಿಸಿದ ಟ್ರೋಫಿ ಅನಾವರಣಗೊಳಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಅನೇಕ ಕ್ರೀಡಾಪಟುಗಳು ವಿವಿಧ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರೂ ಅವಕಾಶ ಸಿಗತ್ತಿಲ್ಲ. ಸ್ಫೂರ್ತಿದಾಯಕ ಸ್ವರ್ಧೆ ಕಡಿಮೆಯಾಗುತ್ತಿದೆ. ಪ್ರಗತಿಪರ ಸಂಘಟನೆಗಳು ಪ್ರಾಯೋಜಕತ್ವ ಪಡೆಯಲು ಹಿಂದೇಟು ಹಾಕುತ್ತಿವೆ. ಪ್ರತಿಭಾನ್ವಿತ ಕ್ರೀಡಾಪಟುಗಳು ಮೂಲಗುಂಪಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿವಿಧ ಕ್ರೀಡೆಯಲ್ಲಿ ಆಸಕ್ತಿ ಇರುವ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಂಡು ನುರಿತ ಕ್ರೀಡಾ ತರಬೇತಿದಾರರಿಂದ ತರಬೇತಿ ನೀಡುವ ಕೆಲಸ ಮಾಡಬೇಕಾಗಿದೆ. ಗ್ರಾಮೀಣ ಸೊಗಡಿನ ಮನರಂಜನಾತ್ಮಕ ಕ್ರೀಡೆಗಳಿಗೆ ಒತ್ತು ನೀಡಬೇಕು. ಭವಿಷ್ಯದ ಕ್ರೀಡಾಪಟುಗಳನ್ನು ರೂಪಿಸುವ ಜವಾಬ್ದಾರಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಕ್ರೀಡಾಚಟುವಟಿಕೆ, ಸಾಮಾಜಿಕ ಸೇವೆ, ವೈಯಕ್ತಿಕ ಜೀವನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಸಾಮಾಜಿಕ ಹೊಣೆಗಾರಿಕೆಯಡಿ ಪ್ರಗತಿಪರ ಸಂಘಟನೆಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಹೆಚ್ಚು ಪಂದ್ಯಾವಳಿ ಆಯೋಜಿಸಬೇಕು. ಇದಕ್ಕೆ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸಹಕಾರ ಅಗತ್ಯ ಎಂದು ಹೇಳಿದರು.
ಶಾಲಾ ಆಡಳಿತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿದ್ಧಾರ್ಥ, ಕಾರ್ಯದರ್ಶಿ ಆರುಂಧತಿ ಇದ್ದರು.