ವಿಜಯಪುರ: ‘ಹಾಸ್ಟೆಲ್ನಲ್ಲಿ ಸರಿಯಾಗಿ ಸೌಲಭ್ಯಗಳು ಒದಗಿಸುತ್ತಿಲ್ಲ. ನೀರು ಶುದ್ಧೀಕರಣ ಮಾಡುವ ಯಂತ್ರ ಕೆಟ್ಟು ಹೋಗಿ ಒಂದು ವಾರವಾದರೂ ಅದನ್ನು ಸರಿಪಡಿಸಿಲ್ಲದ ಕಾರಣ ನಾವು ಕೊಳವೆಬಾವಿಯ ನೀರನ್ನೇ ಕುಡಿಯುತ್ತಿದ್ದು ಎಲ್ಲರಿಗೂ ಅನಾರೋಗ್ಯ ಕಾಡಲಾರಂಭಿಸಿದೆ’ ಎಂದು ಆರೋಪಿಸಿ ವಿದ್ಯಾರ್ಥಿ ನೀರಿನ ಫಿಲ್ಟರ್ನ್ನು ಹೊರಗೆ ತಂದಿಟ್ಟು ಪ್ರತಿಭಟನೆ ನಡೆಸಿದರು.
ಇಲ್ಲಿನ ದೇವನಹಳ್ಳಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಿಗಬೇಕಾದಂತಹ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಬಕೆಟ್ಗಳಿಲ್ಲ. ಸರಿಯಾಗಿ ಊಟ ನೀಡುತ್ತಿಲ್ಲ. ನಿಲಯದಲ್ಲಿರುವ ಟಿ.ವಿ. ರಿಚಾರ್ಜ್ ಮಾಡಿಸಿಲ್ಲ. ಬೆಡ್ ಶೀಟ್ಗಳಿಲ್ಲ. ಕಳಪೆ ಗುಣಮಟ್ಟದ ತರಕಾರಿಗಳು ತರುತ್ತಾರೆ ಎಂದು ದೂರಿದರು.
‘ವಾರ್ಡನ್ ಅವರನ್ನು ಕೇಳಿಲಿಕ್ಕೆ ಅವರು ಇಲ್ಲಿ ಇರುವುದಿಲ್ಲ. ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿಕ್ಕೆ ಪೋನ್ ಮಾಡಿದರೂ ತೆಗೆಯುವುದಿಲ್ಲ. ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿದರೂ ಅವರು ಬಂದಿದ್ದರು. ಆಶ್ವಾಸನೆ ಕೊಟ್ಟು ಹೋದರೆ ವಿನಾ ಸಮಸ್ಯೆ ಬಗೆಹರಿಸಲಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಸ್ಥಳಕ್ಕೆ ಬಂದ ವಾರ್ಡನ್ ಚಲಪತಿ ಅವರು ಮಾತನಾಡಿ, ‘ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ಕೊಡುತ್ತಿದ್ದೇವೆ. ನೀರು ಶುದ್ಧೀಕರಣ ಮಾಡುವ ಯಂತ್ರ ಕೆಟ್ಟುಹೋಗಿರುವುದು ನಿಜ. ಅದನ್ನು ರಿಪೇರಿ ಮಾಡಿಸಲಿಕ್ಕೆ ಪ್ರಯತ್ನ ಮಾಡಿದ್ದೇವೆ. ಮೆಕ್ಯಾನಿಕ್ ಬಂದಿಲ್ಲ. ಕೂಡಲೇ ಸರಿಪಡಿಸುವ ಕೆಲಸ ಮಾಡುತ್ತೇವೆ. ತಕ್ಷಣಕ್ಕೆ ನೀರಿನ ಕ್ಯಾನ್ ತಂದು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತೇವೆ. ನಿಲಯದಲ್ಲಿನ ಸಮಸ್ಯೆಗಳನ್ನೂ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.
ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, ‘ವಿದ್ಯಾರ್ಥಿನಿಲಯಕ್ಕೆ ಭೇಟಿ ಕೊಡುತ್ತಲೇ ಇರುತ್ತೇವೆ. ನಿಲಯದಲ್ಲಿ ಏನಾದರೂ ಸಮಸ್ಯೆಯಿದ್ದರೆ ವಿದ್ಯಾರ್ಥಿಗಳು ಗಮನಕ್ಕೆ ತಂದರೆ ತಕ್ಷಣ ಬಗೆಹರಿಸುವ ಕೆಲಸ ಮಾಡುತ್ತೇವೆ. ಅದನ್ನು ಬಿಟ್ಟು ಏಕಾಏಕಿ ಈ ರೀತಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ನಿಲಯಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡುತ್ತೇನೆ’ ಎಂದರು.
ವಿದ್ಯಾರ್ಥಿಗಳಾದ ಮಂಜುನಾಥ್, ನಂಜಪ್ಪ, ಪೃಥ್ವಿರಾಜ್, ವೆಂಕಟೇಶ್, ಹನುಮಂತರಾಠೋಡ್, ಯೋಗಪ್ಪ, ಶ್ರೀನಿವಾಸ್, ಯೇಸುರಾಜ್, ಬಾಲುಸ್ವಾಮಿ, ಗಿರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.