ದೊಡ್ಡಬಳ್ಳಾಪುರ: ನಗರದ ಅರುಳುಮಲ್ಲಿಗೆ ಬಾಗಿಲು ತೇರಿನಬೀದಿಯಲ್ಲಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹುಂಡಿಯ ಕಾಣಿಕೆ ಹಣ ಕಳವು ಮಾಡಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇತ್ತೀಚೆಗಷ್ಟೆ ಜೀರ್ಣೊದ್ದಾರ ಮಾಡಲಾಗಿದ್ದ ದೇವಾಲಯದ ಬಾಗಿಲಿಗೆ ಅಳವಡಿಸಲಾಗಿದ್ದ ಚಿಲಕವನ್ನು ಹೊಡೆದು ದುಷ್ಕರ್ಮಿಗಳು ದೇವಾಲಯದಲ್ಲಿದ್ದ ಎರಡು ಹುಂಡಿಯಲ್ಲಿನ ಕಾಣಿಕೆಯನ್ನು ದೋಚಿದ್ದಾರೆ.
ಕೈಗಾರಿಕೆಗಳಿಗೆ ಹೋಗುವ ಕಾರ್ಮಿಕರು, ಇಡೀ ರಾತ್ರಿ ನೇಕಾರರ ಕಾರ್ಮಿಕರು ಸೇರಿದಂತೆ ಜನ ಸಂಚಾರ ಹೆಚ್ಚಾಗಿರುವ ತೇರಿನಬೀದಿಯ ದೇಗುಲದಲ್ಲಿ ಹುಂಡಿ ಹಣ ಕಳವು ಮಾಡಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ.
ಆರು ತಿಂಗಳಿಂದ ಗ್ರಾಮೀಣ ಪ್ರದೇಶ ದೇವಾಲಯಗಳಲ್ಲಿ ಹುಂಡಿಗಳ ಕಳವು ನಡೆಯುತ್ತಿದ್ದವು. ಈಗ ನಗರದ ಪ್ರದೇಶದಲ್ಲಿನ ದೇವಾಲಯಗಳಲ್ಲೂ ಅದರಲ್ಲೂ ಹೆಚ್ಚು ಜನ ಸಂಚಾರ ಇರುವ ದೇವಾಲಯಗಳಲ್ಲೂ ಹುಂಡಿ ಕಳವು ನಡೆದಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.