ಕುಂದಾಣ (ದೇವನಹಳ್ಳಿ ತಾಲ್ಲೂಕು): ತಾಲ್ಲೂಕಿನ ಕುಂದಾಣ ಪ್ರಾಥಮಿಕ ಆರೋಗ್ಯ ಕೇಂದ್ರವು ಆರೋಗ್ಯ ಇಲಾಖೆಯಿಂದ ನೀಡುವ 2020-21ನೇ ಸಾಲಿನ ಅತ್ಯುತ್ತಮ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದೆ.
ಸತತ ಎರಡು ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿರುವ ಈ ಪಿಎಚ್ಸಿಯು ಇದೇ ಮೊದಲ ಬಾರಿಗೆ ಅತ್ಯುತ್ತಮ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗಿದೆ.
ಈ ಪ್ರಶಸ್ತಿಯನ್ನು ವಿಶ್ವನಾಥಪುರ ಪಿಎಚ್ಸಿಯ ವೈದ್ಯಾಧಿಕಾರಿಯಾಗಿರುವ ಡಾ.ಮುತಾಹೀರ್ ಹಫೀಜ್ 2018ರಲ್ಲಿ ಪ್ರಾರಂಭಿಸಿದ್ದರು. ಅದರ ಭಾಗವಾಗಿ ಕುಂದಾಣ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಶಸ್ತಿ ಪಡೆದಿರುವುದು ವಿಶೇಷ.
‘ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಸಾತ್ ಅವರ ನೇತೃತ್ವದಲ್ಲಿ ಗುಣಮಟ್ಟದ ಭರವಸೆಯ ಆಸ್ಪತ್ರೆಯಾಗಿ ಹೊರಹೊಮ್ಮಿದೆ’ ಎಂದು ಗುಣಮಟ್ಟ ಸಂಯೋಜಕಿ ಮತ್ತು ಶುಶ್ರೂಷ ಅಧಿಕಾರಿ ಉಷಾ ಎಚ್. ತಿಳಿಸಿದರು.
ಡಾ.ಪ್ರಸಾತ್, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರಪ್ಪ, ಹಿರಿಯ ಸುರಕ್ಷತಾಧಿಕಾರಿ ಓಂಕಾರಮ್ಮ, ನೇತ್ರಾಧಿಕಾರಿ ಪಲ್ಲವಿ, ಆರೋಗ್ಯ ಸುರಕ್ಷತಾಧಿಕಾರಿ ಅನಿತಾ, ಶ್ವೇತಾ, ಆಂಜಿನಮ್ಮ, ‘ಡಿ’ ಗ್ರೂಪ್ ಸಿಬ್ಬಂದಿಯಾದ ರಾಘವೇಂದ್ರ, ಮಲ್ಲಿಕಾರ್ಜುನ, ಮಂಜುಳಾ ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.