ಕನಕಪುರ: ‘ಪ್ರಧಾನಿ ಪರಿಕಲ್ಪನೆಯಂತೆ ಭಾರತದ ಸ್ವಚ್ಛತೆಗೆ ಕೈಜೋಡಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕಿನ ಎಲ್ಲ ಶ್ರದ್ಧಾಕೇಂದ್ರಗಳಲ್ಲಿ ಸಾರ್ವಜನಿಕರ ಜತೆಗೂಡಿ ಸ್ವಚ್ಛತೆ ಕಾರ್ಯ ನಡೆಸುತ್ತಿದೆ. ಆ ಜಾಗದಲ್ಲಿ ಕಸವನ್ನು ಸಂಗ್ರಹಿಸಲು ಉಚಿತವಾಗಿ ಎರಡು ಟಬ್ಗಳನ್ನು ಕೊಡುತ್ತಿದ್ದೇವೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಬಾಬುನಾಯ್ಕ್ ತಿಳಿಸಿದರು.
ಇಲ್ಲಿನ ಮಳಗಾಳು ಗ್ರಾಮದಲ್ಲಿರುವ ಯೋಜನೆಯ ಕೇಂದ್ರ ಕಚೇರಿಯಲ್ಲಿ ಕಸ ಸಂಗ್ರಹಣೆಯ ಟಬ್ಗಳನ್ನು ವಿತರಣೆ ಮಾಡಿ ಮಾತನಾಡಿ, ‘ದೇವಾಲಯಗಳು ಶುಚಿತ್ವದಿಂದ ಕೂಡಿದ್ದರೆ ಆ ಗ್ರಾಮವೇ ಸ್ವಚ್ಛವಾಗಿರುತ್ತದೆ ಎಂಬುದು ನಮ್ಮ ನಂಬಿಕೆಯಾಗಿದೆ’ ಎಂದರು.
‘ಅಲ್ಲಿ ನಾವು ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ತೆಗೆದುಕೊಂಡರೆ ಅದು ಗ್ರಾಮಸ್ಥರ ಜನರಲ್ಲಿ ಜಾಗೃತಿ ಮೂಡುತ್ತದೆ. ಆ ಕಾರಣದಿಂದಲೇ ಹಸಿ ಕಸ ಸಂಗ್ರಹಣೆಗೆ ಹಸಿರು ಟಬ್, ಒಣ ಕಸಕ್ಕೆ ನೀಲಿ ಟಬ್ ಉಚಿತವಾಗಿ ನೀಡಿದ್ದೇವೆ’ ಎಂದರು.
ಈ ಒಂದು ಸ್ವಚ್ಛತಾ ಕಾರ್ಯವನ್ನು ರಾಜ್ಯದೆಲ್ಲೆಡೆ ಮಾಡುತ್ತಿದ್ದು ರಾಜ್ಯದಲ್ಲಿ 20 ಸಾವಿರ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಗುರುತಿಸಿದ್ದೇವೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿ 530 ಶ್ರದ್ಧಾಕೇಂದ್ರಗಳಿವೆ. ಕನಕಪುರ ತಾಲ್ಲೂಕಿನಲ್ಲಿ ಇರುವ 100 ಶ್ರದ್ಧಾಕೇಂದ್ರಗಳಲ್ಲೂ ಸ್ವಚ್ಛತಾ ಕಾರ್ಯವನ್ನು ಈಗಾಗಲೆ ಪೂರ್ಣಗೊಳಿಸಿದ್ದು ಆ ಸ್ಥಳಗಳಿಗೆ ಸಂಬಂಧಸಿದಂತೆ ಅಲ್ಲಿನ ಪ್ರಮುಖರಿಗೆ ಇಂದು ಟಬ್ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಗರಸಭೆ ಸದಸ್ಯ ಸ್ಟುಡಿಯೋ ಚಂದ್ರು ಮಾತನಾಡಿ, ಪರಿಸರ ಸ್ವಚ್ಛತೆ ಎಲ್ಲರ ಆದ್ಯ ಕರ್ತವ್ಯವಾಗಿದೆ. ಧರ್ಮಸ್ಥಳ ಸಂಸ್ಥೆಯು ಸಾರ್ವಜನಿಕವಾಗಿ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಇದಕ್ಕೆ ನಾವು ಅವರ ಜತೆ ಕೈ ಜೋಡಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಬೇಕಿದೆ ಎಂದು ತಿಳಿಸಿದರು.
ನಗರಸಭೆ ಸದಸ್ಯ ವಿ.ರಾಜು, ಸಂಸ್ಥೆಯ ಜಿಲ್ಲಾ ಪ್ರಬಂಧಕ ಸುಬ್ಬರಾಯ ನಾಯ್ಕ್, ತಾಲ್ಲೂಕು ಯೋಜನಾಧಿಕಾರಿ ಹರಿಪ್ರಸಾದ್ ರೈ, ಮೇಲ್ವಿಚಾರಕರಾದ ಸುನಿಲ್, ಉಮೇಶ್, ಗಿರೀಶ್, ಶ್ರದ್ಧಾಕೇಂದ್ರದ ಪದಾಧಿಕಾರಿಗಳು, ಕಚೇರಿಯ ಸಿಬ್ಬಂದಿ ಇದ್ದರು.