ಸೂಲಿಬೆಲೆ: ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿ ವಿಶ್ವದಲ್ಲಿ ಭಾರತದ ಕೀರ್ತಿ ಪಸರಿಸಲು ಕಾರಣಕರ್ತರಾದ ಆಧ್ಯಾತ್ಮಿಕ ಚೇತನ, ಸ್ವಾಮಿ ವಿವೇಕಾನಂದರು ಎಂದು ಜೇನುಗೂಡು ರೂರಲ್ ಡೆವಲಪ್ಮೆಂಟ್ ಟ್ರಸ್ಟ್ನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಹೇಳಿದರು.
ಸೂಲಿಬೆಲೆ ಹೋಬಳಿಯ ಬಾಲೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಯುವ ಜನತೆಗೆ ವಿವೇಕಾನಂದರ ಆದರ್ಶಗಳು ದಾರಿದೀಪವಾಗಿದ್ದು, ದೇಶದ ಯುವ ಜನರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಯುವಕರಿಗೆ ಕರೆ ನೀಡಿದರು.
‘ಗುರು ಶಿಷ್ಯ ಪರಂಪರೆಗೆ ಸ್ವಾಮಿ ವಿವೇಕಾನಂದರು ಹಾಗೂ ರಾಮಕೃಷ್ಣ ಪರಮಹಂಸರು ನಿದರ್ಶನವಾಗಿದ್ದು, ವಿದ್ಯಾರ್ಥಿಗಳು ಗುರುಗಳಿಗೆ ಗೌರವ ನೀಡುತ್ತಾ ಅವರ ಮಾರ್ಗದರ್ಶನದಲ್ಲಿ ಸಾಗಿದರೆ ಗುರಿ ತಲುಪಬಹುದು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೊಸಕೋಟೆ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎನ್.ಮುನಿನಾರಾಯಣ ಸ್ವಾಮಿ ಮಾತನಾಡಿ, ‘ಮಕ್ಕಳಿಗೆ ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರಂತಹ ಅಧ್ಯಾತ್ಮಿಕ ಹಾಗೂ ಗಣ್ಯ ವ್ಯಕ್ತಿಗಳ ಜೀವನ ಪರಿಚಯ ಮಾಡಿಕೊಡುವ ಮೂಲಕ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಸಬೇಕು’ ಎಂದರು.
ಸಾಹಿತ್ಯ ಪರಿಷತ್ ತಾಲ್ಲೂಕು ಕೋಶಾಧ್ಯಕ್ಷ ಬೆಟ್ಟಹಳ್ಳಿ ಗೋಪಿನಾಥ್ ಮಾತನಾಡಿದರು. ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿ ಉಡುಗೊರೆಯಾಗಿ ನೀಡಿ ಸಿಹಿ ಹಂಚಲಾಯಿತು.
ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ, ಜೇನುಗೂಡು ರೂರಲ್ ಟ್ರಸ್ಟ್ ಸೂಲಿಬೆಲೆ ಹಾಗೂ ಬಾಲೇನಹಳ್ಳಿ ಸರ್ಕಾರಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಂಡಿಗಾನಹಳ್ಳಿ ಸಿ.ಆರ್.ಪಿ ಸುಮಂಗಳಮ್ಮ, ಮುಖ್ಯ ಶಿಕ್ಷಕಿ ಧನಲಕ್ಷ್ಮಮ್ಮ, ಶಿಕ್ಷಕಿ ಸೌಭಾಗ್ಯ ಹಾಗೂ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.