ದೇವನಹಳ್ಳಿ: ಸಂವಿಧಾನ ಹೊರತಾಗಿ ದೇಶವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಇಂದು ಸಂವಿಧಾನ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಸಂವಿಧಾನ ರಕ್ಷಿಸುವ ಅಭ್ಯರ್ಥಿಗಳಿಗೆ ಮತ ನೀಡಿ ಪ್ರಜಾ ಪ್ರಭುತ್ವ ಉಳಿಸಿ ಎಂದು ಸಂವಿಧಾನ ರಕ್ಷಣಾ ವೇದಿಕೆಯ ಮುಖ್ಯಸ್ಥ ನಿರಂಜನ್ ಆರಾಧ್ಯ ತಿಳಿಸಿದರು.
ಕಾಲಕ್ಕೆ ತಕ್ಕಂತೆ ಸಂವಿಧಾನದಲ್ಲಿ ಬದಲಾವಣೆಯಾಗಿದೆ. ಇದು ಜನರ ಕ್ಷೇಮಾಭಿವೃದ್ಧಿಗಾಗಿ ಮಾಡಿದ ಸಾರ್ವಭೌಮ ರಾಜಕೀಯ ಪ್ರಕ್ರಿಯೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾಕಷ್ಟು ರಾಜಕೀಯ ಶಕ್ತಿಗಳು ಸಂವಿಧಾನವನ್ನೇ ರದ್ದು ಮಾಡಿ, ಪ್ರಜಾಪ್ರಭುತ್ವ ಗಣರಾಜ್ಯವಾಗಿರುವ ಭಾರತದ ಅಸ್ತಿತ್ವವನ್ನೇ ಬದಲಾವಣೆ ಮಾಡಲು ಪಣತೊಟ್ಟಿವೆ. ಅದರ ವಿರುದ್ಧ ಪ್ರಜ್ಞಾವಂತ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಣ ಮೂಲಭೂತ ಹಕ್ಕಾಗಿ ಸಂವಿಧಾನಕ್ಕೆ ಸೇರ್ಪಡೆಯಾದರೂ, ಇಂದಿಗೂ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಆಳುವ ಸರ್ಕಾರ ಎಡವಿದೆ. ಪ್ರತಿ ನೂರು ಶಾಲೆಯಲ್ಲಿ ಕೇವಲ ಇಪ್ಪತ್ತೈದು ಶಾಲೆಗಳಿಗೆ ಸವಲತ್ತು ಲಭಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ಉಳಿಯಬೇಕಿದ್ದರೇ ಶಿಕ್ಷಣದಿಂದ ಮಾತ್ರ ಸಾಧ್ಯ, ಆದರೆ, ಮಕ್ಕಳ ಪಠ್ಯದಲ್ಲಿ ಕೋಮು ಬಣ್ಣದ ಅಂಶಗಳು ರಾರಾಜಿಸುತ್ತಿದೆ. ಅವೈಜ್ಞಾನಿಕ ಶಿಕ್ಷಣದಿಂದ ಬಹುತ್ವದ ಗುಣ ಮರೆಯಾಗುತ್ತಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿದಂತೆ ವಿಷಯಗಳನ್ನು ತಪ್ಪಾಗಿ ಅರ್ಥೈಸುವ ಪರಿಸ್ಥಿತಿ ಎದುರಾಗಿದ್ದು, ಅವುಗಳನ್ನು ಸರಿ ದಾರಿಗೆ ತಂದು, ಪ್ರಜೆಗಳ ಪ್ರಜ್ಞಾವಂತಿಗೆ ಹೆಚ್ಚಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಿ, ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ಎಂದರು.