ವಿಜಯಪುರ: ಬೈಪಾಸ್ ರಸ್ತೆಯಿಂದ ಚಿಕ್ಕತತ್ತಮಂಗಲ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳು ಡಾಂಬರೀಕರಣವಾಗದೆ ದುಸ್ಥಿತಿಯಲ್ಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗಿದೆ. ಕೊರಕಲು ಗುಂಡಿಗಳಾಗಿರುವ ಪರಿಣಾಮ ದ್ವಿಚಕ್ರವಾಹನ ಸವಾರರು ಮುಗ್ಗರಿಸುವ ಅವಕಾಶಗಳೇ ಹೆಚ್ಚು. ಗ್ರಾಮದಿಂದ ನೂರಾರು ಮಂದಿ ದ್ರಾಕ್ಷಿ ಕಟಾವಿಗೆ ವಿವಿಧ ಊರುಗಳಿಗೆ ತೆರಳುತ್ತಾರೆ ಸುತ್ತ ಮುತ್ತಲು ಅರಣ್ಯ ಪ್ರದೇಶವಿರುವುದರಿಂದ ಈ ರಸ್ತೆಯಲ್ಲಿ ನಡೆದು ಸಾಗುವುದು ಸಹ ಅಪಾಯಕಾರಿ ಕನಿಷ್ಠ ಪಕ್ಷ ಬೀದಿ ದೀಪಗಳನ್ನು ಅಳವಡಿಸಿದರೆ ನೆಮ್ಮದಿಯಿಂದ ನಡೆದು ಸಾಗಬಹುದು ಎನ್ನುತ್ತಾರೆ ಸಾರ್ವಜನಿಕರು.
ವಿಜಯಪುರ, ದೇವನಹಳ್ಳಿ ಪಟ್ಟಣಗಳಿಂದ ಬೆಂಗಳೂರು ಮುಖ್ಯರಸ್ತೆ ಮೂಲಕ ತಿಮ್ಮನಹಳ್ಳಿ, ಚಿಕ್ಕತತ್ತಮಂಗಲ, ದೊಡ್ಡತತ್ತಮಂಗಲ, ಯಲಿಯೂರು, ಹಳಿಯೂರು, ಮಂಡಿಬೆಲೆ, ಗಡ್ಡದನಾಯ್ಕನಹಳ್ಳಿ ಗ್ರಾಮಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.