ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 87ನೇ ಜನ್ಮದಿನದ ಅಂಗವಾಗಿ ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಪಟ್ಟಣದ ಬಂಗಾರ ಧಾಮದಲ್ಲಿ ಶನಿವಾರ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ‘ಎಸ್. ಬಂಗಾರಪ್ಪ ಅವರು ಜಾತಿ ವ್ಯವಸ್ಥೆಯಿಂದ ದೂರವಿದ್ದು, ಹಿಂದುಳಿದ ವರ್ಗದ ಜನರ ಹಾಗೂ ಬಡವರ ಏಳಿಗೆಗಾಗಿ ಚಿಂತಿಸಿ ಜಾರಿಗೆ ತಂದ ಯೋಜನೆಗಳು ಎಂದಿಗೂ ಜೀವಂತ. ಅವರ ಆಶಯದಂತೆ, ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕ್ಷೇತ್ರದ ಜನರ ಕಷ್ಟ-ಸುಖಗಳಲ್ಲಿ ಜೊತೆಗಿರುತ್ತೇನೆ’ ಎಂದರು.
ಉತ್ತರ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯೆ ತಾರಾ ಶಿವಾನಂದ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾಗರಾಜ ಚಂದ್ರಗುತ್ತಿ, ಸುನೀಲ್ಗೌಡ, ಎಪಿಎಂಸಿ ಅಧ್ಯಕ್ಷ ಕೆ. ಅಜ್ಜಪ್ಪ, ಪಟ್ಟಣ ಪಂಚಾಯಿತಿ ಸದಸ್ಯೆ ಪ್ರೇಮಾ ಟೋಕಪ್ಪ, ಸುನೀಲ್, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ವಕ್ತಾರ ಎಂ.ಡಿ. ಶೇಖರ್, ಕೆ.ವಿ. ಗೌಡ, ಪರಶುರಾಮ ಸಣ್ಣಬೈಲ್, ಬಲರಾಮಪ್ಪ, ಪಾಣಿ ಡಾಕಪ್ಪ, ಜಯಶೀಲಪ್ಪ, ದರ್ಶನ್ ಇದ್ದರು.
ಬಿಜೆಪಿಯಿಂದ ಸ್ಮರಣೆ:
ದುರ್ಬಲ ಹಾಗೂ ಹಿಂದುಳಿದವರ ಪರ ಹಲವು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರಿಗೆ ಸಲ್ಲುತ್ತದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ ಗೌಡ ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಎಸ್. ಬಂಗಾರಪ್ಪ ಅವರ 87ನೇ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಗಾರಪ್ಪ ಅವರು ಯಾವುದೇ ಜಾತಿ ಮತ್ತು ವರ್ಗಕ್ಕೆ ಸೀಮಿತವಾದ ಆಡಳಿತವನ್ನು ನಡೆಸಲಿಲ್ಲ. ಬಸವಣ್ಣ
ನವರ ತತ್ವ ಸಿದ್ಧಾಂತದಂತೆ ಕೆಳ ವರ್ಗದ ಕಲ್ಯಾಣವನ್ನು ಕಂಡಂತಹ ಧೀಮಂತ ನಾಯಕರಾಗಿದ್ದರು. ಈಗಲೂ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಸದಸ್ಯ ಎಂ.ಡಿ. ಉಮೇಶ್, ‘ಬಂಗಾರಪ್ಪ ಅವರು ಅಧಿಕಾರದಲ್ಲಿ ತಂದ ಅಕ್ಷಯ, ಗ್ರಾಮೀಣ ಕೃಪಾಂಕ, ರೈತರ ಪಂಪ್ಸೆಟ್ಗೆ ಉಚಿತ ವಿದ್ಯುತ್ ಸೇರಿ ಅನೇಕ ಬಡವರ ಪರ ಯೋಜನೆಗಳನ್ನು ಘೋಷಿಸಿ, ಹಿಂದುಳಿದ ವರ್ಗದ ಜನರ ಹಾಗೂ ರೈತರ ಆರ್ಥಿಕ ಪ್ರಗತಿಗೆ ಕಾರಣರಾಗಿದ್ದಾರೆ.ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಅನೇಕ ಭೂ ರಹಿತರಿಗೆ ಜಮೀನು ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ನಾಯಕನ ಜನ್ಮ ದಿನವನ್ನು ನಾವೆಲ್ಲರೂ ಆಚರಣೆ ಮಾಡುವುದು ಅರ್ಥಪೂರ್ಣ’ ಎಂದರು.
ಎಸ್. ಬಂಗಾರಪ್ಪ ಅವರ ಒಡನಾಡಿ ಕಲ್ಲಂಬಿ ಹಿರಿಯಪ್ಪ, ‘ದಾರ್ಶನಿಕರ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಸಮಾಜವಾದಿ ಚಿಂತನೆಯೊಂದಿಗೆ ಜನರ ನಾಡಿಮಿಡಿತ ಅರಿತು ಆಡಳಿತ ನಡೆಸಿದ ಪ್ರಬುದ್ಧ ರಾಜಕಾರಣಿ ಎನಿಸಿದ್ದರು. ನೇರ ನಡೆ-ನುಡಿಯೊಂದಿಗೆ ಹಟ, ಛಲದ ಮೂಲಕ ರಾಜಕಾರಣ ನಡೆಸಿದರೂ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು’ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಈರೇಶ್ ಮೇಸ್ತ್ರಿ, ನಟರಾಜ, ಜಯಲಕ್ಷೀ, ವಕೀಲ ವೈ.ಜಿ. ಪುಟ್ಟಸ್ವಾಮಿ, ಭೋಗೇಶ್ ಶಿಗ್ಗಾ, ಬಸವರಾಜಗೌಡ, ಶಿವಕುಮಾರ ಕಡಸೂರು, ಎ.ಎಸ್. ಹೇಮಚಂದ್ರ, ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಟಿ.ಆರ್. ಸುರೇಶ್, ಯೂಸೂಫ್ ಸಾಬ್, ಉಮೇಶ್ ಗೌಡ, ಸುಧೀರ್ ಪೈ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.