ಬೆಳಗಾವಿ: ‘ಇಲ್ಲಿನ ಕ್ಯಾಂಪ್ ಠಾಣೆ ಪೊಲೀಸರು ಅಂತರರಾಜ್ಯ ಮನೆಗಳ್ಳರಿಬ್ಬರನ್ನು ಸೋಮವಾರ ಬಂಧಿಸಿ, ಅವರಿಂದ ₹ 28.08 ಲಕ್ಷ ಮೌಲ್ಯದ ಅರ್ಧ ಕೆ.ಜಿ. ಚಿನ್ನಾಭರಣಗಳು ಮತ್ತು ₹ 11.50 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆದಿದ್ದಾರೆ’ ಎಂದು ಡಿಸಿಪಿ ಸಿ.ಆರ್. ನೀಲಗಾರ ತಿಳಿಸಿದರು.
‘ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಸ್ಪುರಲಿ ಗ್ರಾಮದ ಪ್ರಶಾಂತ ಕರೋಶಿ ಹಾಗೂ ಅವಿನಾಶ ಅಡಾವಕರ ಬಂಧಿತರು. ಇಲ್ಲಿನ ಲಕ್ಷ್ಮಿಟೇಕ್ ನಕ್ಷತ್ರ ಕಾಲೊನಿಯ ಅಸ್ಟನ್ಜಾನ್ ಡಿಅಲ್ಮೆಡಾ ಅವರ ಮನೆಯಲ್ಲಿ ಕಳವಾಗಿದ್ದ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದಾಗ, ಆರೋಪಿಗಳು ಕೊಲ್ಹಾಪುರ ಸೇರಿದಂತೆ ವಿವಿಧ ಮೂರು ಕಡೆಗಳಲ್ಲಿ ಕಳವು ಮಾಡಿರುವುದು ತಿಳಿದುಬಂದಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಗೂಗಲ್ ಮ್ಯಾಪ್ ಮೂಲಕ ಹೊರವಲಯದ ಮನೆಗಳ ಮಾಹಿತಿ ಪಡೆಯುತ್ತಿದ್ದರು. ಆ ಪ್ರದೇಶದಲ್ಲಿ ಓಡಾಡಿ ಬೀಗ ಹಾಕಿರುವ ಮನೆಗಳನ್ನು ನೋಡಿಕೊಂಡು, ಸಂಪೂರ್ಣ ಮಾಹಿತಿ ಸಂಗ್ರಹಿಸಿ ನಂತರ ಕಳವು ಮಾಡುತ್ತಿದ್ದರು. ಮನೆಗಳಲ್ಲಿ ಬಂಗಾರದ ಆಭರಣ, ಕಾರು ಹಾಗೂ ಹಣವನ್ನು ಕದಿಯುತ್ತಿದ್ದರು ಎನ್ನುವುದು ಅವರ ವಿಚಾರಣೆಯಿಂದ ತಿಳಿದುಬಂದಿದೆ’ ಎಂದು ತಿಳಿಸಿದರು.
ಇನ್ಸ್ಪೆಕ್ಟರ್ ಡಿ. ಸಂತೋಷ್ಕುಮಾರ್, ಎಎಸ್ಐ ಬಿ.ಆರ್. ಡೂಗ್, ಸಿಬ್ಬಂದಿ ಬಿ.ಬಿ. ಗೌಡರ, ಎ.ಕೆ. ಶಿಂತ್ರೆ, ಎಂ.ಎ. ಪಾಟೀಲ, ಬಿ.ಎಂ. ನರಗುಂದ, ಎಸ್.ಎಚ್. ತಳವಾರ, ಯು.ಎಂ. ಥೈಕಾರ, ಎ.ಎಂ. ಪಾಟೀಲ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.