ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅವರಾದಿ ಸೇತುವೆಯಿಂದ ಘಟಪ್ರಭಾ ನದಿಯಲ್ಲಿ ಭಾನುವಾರ ಟ್ರ್ಯಾಕ್ಟರ್ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಪಶ್ಚಿಮ ಬಂಗಾಳದ ಚುರಕಾ ಸುರೇನ್ ಶವವಾಗಿ ಮಂಗಳವಾರ ಪತ್ತೆ ಆಗಿದ್ದಾರೆ.
‘ಘಟನೆ ನಡೆದ ದಿನದಿಂದೇ ರಾಷ್ಟ್ರೀಯ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಹಯೋಗದಲ್ಲಿ ಸುರೇನ್ಗಾಗಿ ಶೋಧ ನಡೆಸಿದ್ದೆವು. ಸೇತುವೆಯಿಂದ 1 ಕಿ.ಮೀ. ಅಂತರದಲ್ಲಿ ನದಿ ದಡದ ಪೊದೆಯಲ್ಲಿ ಶವ ಪತ್ತೆಯಾಗಿದೆ’ ಎಂದು ಕುಲಗೋಡ ಠಾಣೆಯ ಪೊಲೀಸರು ತಿಳಿಸಿದ್ದಾರೆ.
‘ಅವರಾದಿ ಸೇತುವೆ ಕೆಳಮಟ್ಟದಲ್ಲಿದ್ದು, ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಮುಳುಗಡೆಯಾಗುತ್ತದೆ. ಆದರೆ, ತಡೆಗೋಡೆ ಇಲ್ಲ ಕಾರಣ ಜನರು ಪ್ರತಿದಿನ ಆತಂಕದಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ. ಸೇತುವೆಯ ಎತ್ತರವನ್ನು ಹೆಚ್ಚಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.