ಹಿರೇಬಾಗೇವಾಡಿ: ಜೈನ ಸಮಾಜದ ಬಹುದಿನಗಳ ಬೇಡಿಕೆಯಾಗಿರುವ ಜೈನ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ನೀಡಿದರು.
ಸಮೀಪದ ಹಲಗಾ ಗ್ರಾಮದಲ್ಲಿ ಬುಧವಾರ ಜೈನ ಯುವ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಂತಿಸಾಗರ ಸಂಸ್ಕಾರ ಬಂಧನ ಶಿಬಿರದ ಎಂಟನೇ ದಿನದ ರ್ಯಾಲಿ ಹಾಗೂ ಪಂಚಾಮೃತ ಅಭಿಷೇಕ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜೈನ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬುದು ಜೈನ ಸಮಾಜದ ಹಲವು ದಿನಗಳ ಬೇಡಿಕೆಯಾಗಿದೆ. ಆಚಾರ್ಯ ಸಿದ್ದಸೇನ ಮುನಿ ಮತ್ತು ಇನ್ನಿತರ ಸ್ವಾಮಿಗಳು ಸಮಾಜದ ಪ್ರಮುಖರು ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿ ಆಧರಿಸಿ ಈಗಾಗಲೆ ನಿಗಮ ಸ್ಥಾಪನೆಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಲಾಗಿದ್ದು, ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಶ್ರೀಗಳ ಹಾಗೂ ಹಲಗಾ ಗ್ರಾಮಸ್ಥರ ಬೇಡಿಕೆಯಂತೆ ಇಲ್ಲಿನ ಬಸದಿಯ ಅಭಿವೃದ್ದಿಗಾಗಿ ಈಗಾಗಲೇ ₹50 ಲಕ್ಷ ಅನುದಾನ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ₹50 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಆಚಾರ್ಯ ಶ್ರೀ ಸಿದ್ದಸೇನ ಮುನಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ರಾಜೇಂದ್ರ ಜಕ್ಕನ್ನವರ, ಸುಕುಮಾರ ಹುಡೇದ, ಮಹಾವೀರ ಬೆಲ್ಲದ, ಸುನಿತಾ ಬೆಲ್ಲದ, ಮಹಾವೀರ ಪಾಟೀಲ ಇದ್ದರು.