ಗೋಕಾಕ: ‘ಸಾಹಿತ್ಯ, ಸಂಸ್ಕೃತಿ, ಕಲೆ ಮೊದಲಾದವುಗಳನ್ನು ಬೇರು ಮಟ್ಟದಲ್ಲಿ ಹುಡುಕಬೇಕು. ಪ್ರಸ್ತುತ ಹೊಂದಾಣಿಕೆ ಸಂಸ್ಕೃತಿ ಆರಂಭವಾಗಿದ್ದು, ಇದು ಮನುಕುಲಕ್ಕೆ ಅಪಾಯಕಾರಿ’ ಎಂದು ಧಾರವಾಡದ ಕಥೆಗಾರ, ಸಂಶೋಧಕ ಡಾ.ಸಂಗಮನಾಥ ಲೋಕಾಪೂರ ಹೇಳಿದರು.
ಇಲ್ಲಿನ ಸಂಗಮ ನಗರದ ಆಧ್ಯಾತ್ಮ ಜ್ಞಾನ ಮಂದಿರದಲ್ಲಿ ಬಳೋಬಾಳದ ಬೆಳುವಲ ಪ್ರಕಾಶನದಿಂದ ದಿ. ಭೀಮಪ್ಪ ಬಾಳಪ್ಪ ಹನಗಂಡಿ ಸ್ಮರಣಾರ್ಥ ಶುಕ್ರವಾರ ಹಮ್ಮಿಕೊಂಡಿದ್ದ ‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಮತ್ತು ಡಾ.ಸುರೇಶ ಹನಗಂಡಿ ಅವರ ಪಿಎಚ್.ಡಿ ಸಂಶೋಧನೆಯ ‘ಕಾಖಂಡಕಿ ಕೃಷ್ಣದಾಸರ ಕೀರ್ತನೆಗಳು’ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಂಸ್ಕೃತಿ ಕಾಪಾಡುವ ವಿಚಾರ ಬಂದಾಗ ಭೂಮಿ ಹದ ಮಾಡುವುದನ್ನು ಬಿಟ್ಟು ಹೃದಯ ಹದ ಮಾಡಿಕೊಂಡರೆ ಸಾಕು. ಅದರಿಂದ ನಾಡು ಶ್ರೀಮಂತಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.
ಗ್ರಂಥ ಬಿಡುಗಡೆ ಮಾಡಿದ ಬೆಳಗಾವಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯ ಆ.ನೇ. ಉಪಾಧ್ಯಾಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ಎಸ್. ಅಂಗಡಿ, ‘ಭಾಷೆ, ವ್ಯಾಕರಣ, ಛಂದಸ್ಸು, ಶಾಸನ ಹಾಗೂ ಹಸ್ತಪ್ರತಿ ಶಾಸ್ತ್ರದಲ್ಲಿ ಸಂಸ್ಕೃತಿ ಅಡಗಿದೆ. ಅವುಗಳನ್ನು ವ್ಯಾಖ್ಯಾನಿಸುವ ಸಂಶೋಧಕರ ಅಗತ್ಯವಿದೆ’ ಎಂದು ಹೇಳಿದರು.
ಹಾರೂಗೇರಿಯ ಎಸ್.ವಿ.ಎಸ್. ಕಾಲೇಜಿನ ಪ್ರಾಚಾರ್ಯ ಡಾ.ವಿ.ಎಸ್. ಮಾಳಿ ಮಾತನಾಡಿದರು.
ಕಲ್ಲೋಳಿಯ ಎಸ್.ಆರ್.ಇ. ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಅಶೋಕ ಪೂಜಾರಿ, ಬೆಳಗಾವಿ ಅಂಜುಮನ್ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಐ.ತಿಮ್ಮಾಪೂರ, ಚಿಕ್ಕೋಡಿಯ ವಕೀಲ ಬಿ.ಡಿ. ಪಾಟೀಲ ಇದ್ದರು.
ವಿವಿಧ ಕ್ಷೇತ್ರದ ಸಾಧಕರಾದ ಬಿ.ಬಿ. ಬೆಳಕೂಡ, ಬಿ.ಎಸ್.ಗೋರೋಶಿ, ಬಿ.ಎಸ್. ಕಡಾಡಿ, ಪ್ರೊ.ಚಂದ್ರಶೇಖರ ಅಕ್ಕಿ, ಪ್ರೊ.ಜಿ.ವಿ. ಮಳಗಿ, ಡಾ.ಸಿ.ಕೆ. ನಾವಲಗಿ, ಬಾಲಶೇಖರ ಬಂದಿ, ಎಸ್.ಕೆ. ಪಾಟೀಲ, ಪ್ರಕಾಶ ಗಿರಿಮಲ್ಲನವರ, ಜಯಾನಂದ ಮಾದರ ಅವರಿಗೆ ‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಮಾಡಿದರು.